ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Saturday, June 25, 2011

ಶ್ರೀ ಶಂಕರಾಚಾರ್ಯರು ಕೊಲ್ಲೂರಿನಲ್ಲಿ ಮಾಡಿದ ಪವಾಡ

  

ಶ್ರೀ ಶಂಕರಾಚಾರ್ಯರು ಕೊಲ್ಲೂರಿನಲ್ಲಿ ಮಾಡಿದ ಪವಾಡ
-ದಿ. ರತ್ನಮ್ಮ ಸುಂದರರಾವ್.

      ಶ್ರೀಶೈಲದಿಂದ ಹೊರಟ ಆಚಾರ್ಯರು ಗೋಕರ್ಣ ಕ್ಷೇತ್ರಕ್ಕೆ ಬಂದರು. ಅಲ್ಲಿ ಈಶ್ವರನ ಆತ್ಮಲಿಂಗವನ್ನೂ, ತಾಮ್ರಗೌರೀ ಸಹಿತನಾದ ಮಹಾಬಲೇಶ್ವರನನ್ನೂ ಕಂಡು ಪುನೀತರಾದರು. ಆ ಕ್ಷೇತ್ರದಲ್ಲಿಯೂ ಅದ್ವೈತ ತತ್ವಗಳ ಪ್ರಚಾರ ಯಥಾವತ್ತಾಗಿ ನಡೆಯಿತು. ಆ ಕ್ಷೇತ್ರದಿಂದ ಹೊರಟ ಆಚಾರ್ಯರು ಪಶ್ಚಿಮ ಘಟ್ಟಗಳ ಅಂಚಿನಲ್ಲೇ ಹೊರಟು ಕೊಡಚಾದ್ರಿ ಪರ್ವತದ ತಪ್ಪಲಿನಲ್ಲಿರುವ ಕೊಲ್ಲೂರು ಕ್ಷೇತ್ರಕ್ಕೆ ಬಂದರು.     ಮೂಕಾಸುರನೆಂಬ ರಾಕ್ಷಸನನ್ನು ಕೊಂದು ಮೂಕಾಂಬಿಕಾ ಎಂಬ ಹೆಸರಿನಿಂದ ಪ್ರಖ್ಯಾತಳಾದ ಅದಿಶಕ್ತಿಯು ನೆಲೆಸಿರುವ ಕ್ಷೇತ್ರವೇ ಕೊಲ್ಲೂರು. ಭವ್ಯವಾದ ದೇವಾಲಯದಲ್ಲಿ ಮೂಕಾಂಬಿಕೆ ನೆಲೆಸಿದ್ದಾಳೆ. ಆಚಾರ್ಯರು ಮೂಕಾಂಬಿಕಾ ದೇವಿಯನ್ನು ಸಂದರ್ಶಿಸಿದುದೇ ಅಲ್ಲದೆ ಅಲ್ಲಿ ಶ್ರೀಚಕ್ರವನ್ನು ಸ್ಥಾಪಿಸಿ, ಕ್ಷೇತ್ರದ ಮಹಿಮೆಯನು ಮತ್ತಷ್ಟು ಹೆಚ್ಚಿಸಿದರು. ಅನೇಕ
ಸ್ತೋತ್ರಗಳನ್ನು ರಚಿಸಿ ದೇವಿಯನ್ನು ಸ್ತುತಿಸಿದರು. ದೇವಿಯನ್ನು ಕಂಡು ಕೃತಾರ್ಥರಾದ ಆಚಾರ್ಯರು ಅನಂತರ ದೇವಾಲಯದಿಂದ ಹೊರಗೆ ಹೊರಟರು. ದ್ವಾರಕ್ಕೆ ಸ್ವಲ್ಪ ದೂರದಲ್ಲಿ ಒಬ್ಬ ಬ್ರಾಹ್ಮಣ ದಂಪತಿಗಳು ತಮ್ಮ ಮಗುವನ್ನು ಮುಂದಿಟ್ಟುಕೊಂಡು ರೋದಿಸುತ್ತಿದ್ದರು. ಆ ಮಗು ಸತ್ತುಹೋಗಿತ್ತು.
     ದೇವಾಲಯದಿಂದ ಹೊರಬಂದ ಆಚಾರ್ಯರನ್ನು ಆ ದಂಪತಿಗಳು ನೋಡಿದರು. ತೇಜಸ್ಸಿನಿಂದ ಕೂಡಿದ ಅವರ ಮುಖವನ್ನು ಕಂಡೊಡನೆ ಆ ದಂಪತಿಗಳು ಈತನಾರೋ ಮಹಾತ್ಮನೇ ಇರಬೇಕು ಎಂದು ಆಲೋಚಿಸಿ ಅವರ
ಬಳಿಗೆ ಬಂದರು. ಸತ್ತುಹೋಗಿದ್ದ ತಮ್ಮ ಮಗುವನ್ನು ಆಚಾರ್ಯರ ಪಾದಗಳ ಬಳಿ ಇಟ್ಟು "ಮಹಾತ್ಮರೇ, ನಿಮ್ಮನ್ನು ನೋಡಿದರೆ ದೈವಾಂಶ ಪುರುಷನ್ನು ಕಂಡಂತೆಯೇ ಭಾಸವಾಗುತ್ತದೆ. ನೀವಾದರೂ ಈ ಮಗುವನ್ನು ಬದುಕಿಸಿಕೊಡಿ. ಇದುವರೆಗೆ ಹದಿಮೂರು ಮಕ್ಕಳನ್ನು ಕಳೆದುಕೊಂಡು ದುಃಖದಲ್ಲಿ ಬೆಂದು ಹೋಗಿದ್ದೇವೆ" ಎಂದು ಅಂಗಲಾಚಿದರು. ಆ ದಂಪತಿಗಳ ದುಃಖದಲ್ಲಿ ಆಚಾರ್ಯರೂ ಒಂದು ಕ್ಷಣ ಭಾಗಿಯಾದರು. ಬಳಿಕ ಅವರನ್ನು ಈರೀತಿ ಪ್ರಶ್ನಿಸಿದರು: "ಸಾವು ಎಂದರೇನು? ಮಗು ಇಲ್ಲೇ ಇದೆಯಲ್ಲಾ?!"     "ಇದು ಮಗುವಿನ ಕಳೇಬರ. ಅದರ ಪ್ರಾಣ ಹೋಗಿ ಎಷ್ಟೋ ಹೊತ್ತಾಗಿದೆ" ಎಂದು ಆ ದಂಪತಿಗಳು ಹೇಳಿದರು.  ಆಚಾರ್ಯರು ಪುನಃ ಕೇಳಿದರು: "ಹಾಗಾದರೆ ನೀವು ಇದುವರೆಗೆ ವಿಶ್ವಾಸದಿಂದ ಮುದ್ದಿಸುತ್ತಿದ್ದುದು ಇಲ್ಲಿರುವ ಈ ದೇಹವನ್ನೋ, ಹೊರಟುಹೋದ ಆ ಪ್ರಾಣವನ್ನೋ?" ಆಚಾರ್ಯರ ಪ್ರಶ್ನೆಗೆ ಏನುತ್ತರ ಕೊಡಬೇಕೆಂದು ಆ ದಂಪತಿಗಳಿಗೆ ತೋಚಲಿಲ್ಲ. ಆಚಾರ್ಯರು ಪುನಃ ಕೇಳಿದರು: "ದೇಹವನ್ನೇ ನೀವು ಮುದ್ದಿಸುತ್ತಿದ್ದಾದರೆ ಈಗಲೂ ಮುದ್ದಿಸಬಹುದು. ಪ್ರಾಣವನ್ನು ನೀವು ಮುದ್ದಿಸುತ್ತಿದ್ದಾದರೆ ಅದು ಆಗಲೂ ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಈಗಲೂ ಕಾಣಿಸುತ್ತಿಲ್ಲ. ಇದಕ್ಕೇಕೆ ನೀವು ದುಃಖಿಸಬೇಕು?"     ಆಚಾರ್ಯರ ತತ್ವೋಪದೇಶ ಆ ದಂಪತಿಗಳ ಮನಸ್ಸನ್ನು ಮುಟ್ಟಲಿಲ್ಲ. ಕ್ಷಣಕ್ಷಣಕ್ಕೂ ಪುತ್ರಶೋಕ ಹೆಚ್ಚುತ್ತ ಅವರನ್ನು ದಹಿಸುತ್ತಿತ್ತು.
------------------------------------------------------------
     ದಿ. ಶ್ರೀಮತಿ ರತ್ನಮ್ಮ ಸುಂದರರಾಯರು ಕೆಳದಿ ಕವಿಮನೆತನದ ಧೀಮಂತ ವ್ಯಕ್ತಿತ್ವದ ದಿ. ಎಸ್.ಕೆ. ಲಿಂಗಣ್ಣಯ್ಯನವರ ಮಕ್ಕಳಲ್ಲಿ ಒಬ್ಬರು. ಇವರ ಪತಿ ಶ್ರೀ ಬ.ನ. ಸುಂದರರಾಯರೂ ಸಹ ಕರ್ನಾಟಕ ಕಂಡ ಖ್ಯಾತ ಸಾಹಿತಿಗಳಲ್ಲಿ ಒಬ್ಬರು. ಇವರು ೧೯೬೯ರಲ್ಲಿ ರಚಿಸಿದ ಶ್ರೀ ಶಂಕರ ಕಥಾಮೃತ ೧೯೮೯ರ ವೇಳೆಗೆ ಆರು ಮುದ್ರಣಗಳನ್ನು ಕಂಡ ಅನುಪಮ ಕೃತಿ. ಶ್ರೀ ಶಂಕರಾಚಾರ್ಯರ ಜೀವನದ ಘಟನೆಗಳನ್ನು ಆಧರಿಸಿ ಕಥಾರೂಪದಲ್ಲಿ ಹೊರತಂದಿರುವುದು ವಿಶೇಷ.
ಅಂತಹ ಒಂದು ಕಥೆಯನ್ನು ನಿಮ್ಮ ಮುಂದಿಟ್ಟಿದೆ.            -ಸಂ.
-----------------------------------------------------------
     ಆಗ ಆಚಾರ್ಯರು ಆ ಕ್ಷೇತ್ರದೇವತೆಯಾದ ಮೂಕಾಂಬಿಕೆಯನ್ನೇ ಸ್ತುತಿಸಿ ಆ ಮಗುವನ್ನು ಬದುಕಿಸಿದರು. ಮಗು ಕಣ್ಣು ಬಿಟ್ಟು ಕೈಕಾಲುಗಳನ್ನಾಡಿಸಿತು. ಅದು ಕಣ್ಣು ಬಿಡುವ ಹೊತ್ತಿಗೆ ಆಚಾರ್ಯರ ತತ್ವೋಪದೇಶ ಆ ತಾಯಿ ತಂದೆಗಳ ಒಳಗಣ್ಣನ್ನು ತೆರೆಯುವಂತೆ ಮಾಡಿತ್ತು. ಈ ಸಂಸಾರವೇ ನಶ್ವರವೆಂಬ ಭಾವನೆ ಅವರಲ್ಲಿ ಮೂಡಿ ಅವರ ಮನಸ್ಸು ವೈರಾಗ್ಯದತ್ತ ಸಾಗತೊಡಗಿತ್ತು. ಆ ದಂಪತಿಗಳು ಅಡಿಗಡಿಗೆ ಆಚಾರ್ಯರಿಗೆ ವಂದಿಸುತ್ತ - "ಮಹಾತ್ಮರೇ, ನಿಮ್ಮ ಉಪದೇಶ ಕೇಳಿ ನಮ್ಮ ಮನಸ್ಸು ಪರಿವರ್ತನೆಯಾಗಿದೆ. ಈ ಸಂಸಾರದ ಸುಖವು ಸಾಕು. ನಮ್ಮನ್ನೂ ತಮ್ಮ ಶಿಷ್ಯರನ್ನಾಗಿ ಪರಿಗ್ರಹಿಸಬೇಕು" ಎಂದು ಪ್ರಾರ್ಥಿಸಿಕೊಂಡರು. ಅದಕ್ಕೆ ಆಚಾರ್ಯರು ಒಪ್ಪಲಿಲ್ಲ. "ಗೃಹಸ್ಥರಾಗಿರುವ ನೀವು ಗೃಹಸ್ಥಾಶ್ರಮದ
ಧರ್ಮಕ್ಕನುಗುಣವಾಗಿ ನಡೆಯಬೇಕು. ಸಂಸಾರದಲ್ಲಿ ಒದಗುವ ಕಷ್ಟ ಸುಖಗಳಿಗೆ ಎದೆಗುಂದದೆ ಧೈರ್ಯವಾಗಿ ಅವುಗಳನ್ನು ಎದುರಿಸಿ ಗೃಹಸ್ಥಾಶ್ರಮದ ಧರ್ಮಗಳನ್ನು ಅನುಸರಿಸಿ ನಡೆಯುವದರಿಂದಲೇ ನಿಮಗೆ ಸದ್ಗತಿಯುಂಟಾಗುವುದು" ಎಂದು ಆ ದಂಪತಿಗಳಿಗೆ ಬುದ್ಧಿವಾದ ಹೇಳಿ ಆಶೀರ್ವದಿಸಿದರು.   ಅನಂತರ ಆಚಾರ್ಯರ ಪ್ರಯಾಣ ಮುಂದುವರೆಯಿತು.
***
('ಕವಿಕಿರಣ'ದ ಡಿಸೆಂಬರ್, 2009ರ ಸಂಚಿಕೆಯಲ್ಲಿ ಪ್ರಕಟಿತ ಕಥೆ).
***************

Monday, June 20, 2011

ಹರಿತ್ಸ-ಗೋತ್ರ

     ಸಂಸ್ಕೃತ ಭಾಷೆಯಲ್ಲಿ ಗೋತ್ರ ಎನ್ನುವ ಪದದ ಅರ್ಥ ಮನೆತನ ಅಥವಾ ವಂಶ ಪರಂಪರೆ ಎಂದು. ಬ್ರಾಹ್ಮಣ ಜಾತಿಯಲ್ಲಿ ಗೋತ್ರ ಎನ್ನುವುದು ವಂಶದ ಮೂಲ ಪುರುಷ ಅಥವಾ ಕುಟುಂಬದ ಯಜಮಾನನಿಂದ ಬಂದದ್ದು. ಪ್ರತಿಯೊಂದು ಗೋತ್ರವೂ ಒಬ್ಬ ಪ್ರಖ್ಯಾತ ಋಷಿಯ ಹೆಸರನ್ನು ಹೊಂದಿ ಆ ಋಷಿಯನ್ನು ವಂಶದ ಮೂಲ ಪುರುಷನೆಂದು ಒಪ್ಪಿಕೊಂಡಿದೆ. ಪ್ರತಿಯೊಂದು ಗೋತ್ರವೂ ಸ ಅಥವ ಅಸ ಎನ್ನುವ ಅಂತ್ಯ ಪ್ರತ್ಯಯದಲ್ಲಿ ಸಂಬೋಧಿಸಲ್ಪಡುತ್ತದೆ.
     ಬ್ರಾಹ್ಮಣ ಜಾತಿಯಲ್ಲಿದ್ದ ಬೇರೆ ಬೇರೆ ಗುಂಪು ಅಥವ ಪಂಗಡಗಳನ್ನು ಕ್ರಮವಾಗಿ ವಿಂಗಡಿಸುವುದರ ಮೂಲಕ ಮೊಟ್ಟ ಮೊದಲ ಪ್ರಯತ್ನವಾಗಿ ಗೋತ್ರದ ಕಲ್ಪನೆ ಹುಟ್ಟಿಕೊಂಡಿತು. ಪ್ರಾರಂಭದಲ್ಲಿ ಕುಲೀನ ವಂಶದವರು ಪ್ರಖ್ಯಾತ ಋಷಿಗಳ ಹೆಸರಿನೊಂದಿಗೆ ತಮ್ಮನ್ನು ಆ ಋಷಿಗಳ ವಂಶಜರೆಂದು ಗುರುತಿಸಿಕೊಳ್ಳುವುದರ ಮೂಲಕ ಗೋತ್ರಗಳು  ಹುಟ್ಟಿಕೊಂಡವು. (ಉದಾ: ಆಂಗೀರಸ, ಅತ್ರಿ, ಗೌತಮ, ಕಶ್ಯಪ, ಭೃಗು, ವಶಿಷ್ಠ, ಕುತ್ಸ, ಭಾರಧ್ವಾಜ). ಇವರಲ್ಲಿ ಮೊದಲ ಏಳು ಋಷಿಗಳನ್ನು ಪ್ರಧಾನವಾಗಿ ಗಣನೆಗೆ ತೆಗೆದುಕೊಂಡು ಅವರನ್ನು ಸಪ್ತ ಋಷಿಗಳೆಂದು ಗುರುತಿಸಿದರು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ವಿಶ್ವಾಮಿತ್ರನು ಮೂಲದಲ್ಲಿ ಕ್ಷತ್ರಿಯನಾಗಿದ್ದು, ನಂತರ ತಪಸ್ಸು, ಸಾಧನೆಗಳಿಂದ ಋಷಿಯಾಗಿ, ನಂತರ ಬ್ರಹ್ಮರ್ಷಿಯಾದ ಸಂಗತಿ ಎಲ್ಲರಿಗೂ ತಿಳಿದಿರುವ ವಿಷಯ. ಆದ್ದರಿಂದ ಬ್ರಾಹ್ಣಣ ಜಾತಿಯಲ್ಲಿದ್ದ ಬೇರೆ ಬೇರೆ ಪಂಗಡ ಅಥವ ಗುಂಪುಗಳನ್ನು ವಿಂಗಡಿಸಿ, ವಂಶದ ಪರಂಪರೆಗೆ ಅನುಗುಣವಾಗಿ ಆಯಾ ಋಷಿಯ ಮೂಲದವರೆಂದು ಗುರುತಿಸಿಕೊಳ್ಳುವ ಪರಿಪಾಠ ಬೆಳೆಯಿತು.
     ಪ್ರಧಾನ ಋಷಿಗಳ ಪರಂಪರೆಯ ಮೂಲದಿಂದ ಬಂದವರನ್ನು ನಂತರ ಪ್ರತ್ಯೇಕ ಪಂಗಡವಾಗಿ ವರ್ಗೀಕರಿಸಲಾಯಿತು. ಅದಕ್ಕೆ ಅನುಗುಣವಾಗಿ ಪ್ರಮುಖ ಗೋತ್ರಗಳನ್ನು ಗಣಗಳಾಗಿ ವರ್ಗೀಕರಿಸಿ, ನಂತರ ಪ್ರತಿಯೊಂದು ಗಣವನ್ನೂ ಮತ್ತೆ ವರ್ಗೀಕರಿಸಿ ಕುಟುಂಬಗಳಾಗಿ ವಿಂಗಡಿಸಲಾಯಿತು.
     ನಿರ್ದಿಷ್ಠ ಗಣ ಅಥವ ಉಪಗಣವನ್ನು ಸ್ಥಾಪಿಸಿದ ಮೂಲಪುರುಷ ಅಥವ ಋಷಿಯ ವಂಶದವನೆಂದು ಪ್ರತಿಯೊಬ್ಬ ಬ್ರಾಹ್ಮಣನೂ ಅಧಿಕಾರಯುತವಾಗಿ ಘೋಷಿಸಿಕೊಳ್ಳುತ್ತಾನೆ. ಇದರ ಪ್ರಕಾರ ಒಬ್ಬ ಋಷಿಯಿಂದ ಸ್ಥಾಪಿಸಲ್ಪಟ್ಟ ಗಣ ಅಥವ ಉಪಗಣವನ್ನೇ ಈಗ ಸಾಮಾನ್ಯವಾಗಿ ಗೋತ್ರ ಎಂದು ಕರೆಯುವುದು.     
____________________________________________
     ಈ ಲೇಖನವನ್ನು ಬರೆದಿರುವ ಶ್ರೀ ಬೆಳವಾಡಿ ಅಶ್ವತ್ಥನಾರಾಯಣರವರು ಧಾರ್ಮಿಕ  ಆಚಾರ-ವಿಚಾರಗಳ ಬಗ್ಗೆ ಹೆಚ್ಚು ತಿಳಿದವರಾಗಿದ್ದಾರೆ. ವೇದ ಪುರಾಣಗಳ ಕುರಿತು ಅಭ್ಯಸಿಸಿದ್ದಾರೆ. ಹಾಸನದಿಂದ ಪ್ರಕಟವಾಗುತ್ತಿರುವ ವಿಪ್ರವಾಹಿನಿ ಪತ್ರಿಕೆಯಲ್ಲಿ ಋಷಿ ಮುನಿಗಳ ಪರಿಚಯಾತ್ಮಕ ಲೇಖನಗಳನ್ನು ಧಾರಾವಾಹಿಯಾಗಿ ಬರೆದಿರುವ ಇವರನ್ನು ಹರಿತ್ಸರ ಕುರಿತು ಲೇಖನ ಬರೆದುಕೊಡಲು ಕೋರಲಾಗಿ ಅವರು ಮಾಹಿತಿ ಸಂಗ್ರಹಕ್ಕಾಗಿ ಬಹಳ ಶ್ರಮಪಟ್ಟು ಈ ಲೇಖನ ಸಿದ್ಧಪಡಿಸಿಕೊಟ್ಟಿದ್ದಾರೆ. ವಿವಿಧ ಮೂಲಗಳಿಂದ ಪಡೆದ ಮಾಹಿತಿ ಆಧರಿಸಿ ಈ ಲೇಖನ ಬರೆಯಲಾಗಿದ್ದು ಡಾ. ಹೆಚ್.ಎಸ್. ಗೋಪಾಲಕೃಷ್ಣಮೂರ್ತಿ, ಎಂ.ಎಸ್ಸಿ. ಪಿ.ಹೆಚ್.ಡಿ., ಬೆಂಗಳೂರು, ಶ್ರೀಮತಿ ಹೆಚ್.ಎನ್. ಇಂದಿರಾ ಸೂರ್ಯಪ್ರಕಾಶ, ಬಿ.ಎಸ್ಸಿ., ಎಂ.ಎ.(ಆಂಗ್ಲ), ಬೆಂಗಳೂರು ಇವರನ್ನು ವಿಶೇಷ ಮಾಹಿತಿ ಸಹಕಾರ ನೀಡಿದ್ದಕ್ಕಾಗಿ ಹಾಗೂ ಇಂಗ್ಲಿಷಿನ ಮಾಹಿತಿ ಕನ್ನಡೀಕರಿಸಿಕೊಟ್ಟದ್ದಕ್ಕಾಗಿ ಶ್ರೀ ಬಿ.ಎಲ್. ಲಕ್ಷ್ಮೀನಾರಾಯಣ, ಹಾಸನ ಇವರನ್ನು ಲೇಖಕರು ಸ್ಮರಿಸಿದ್ದಾರೆ.                   -ಸಂ.                                                  
ಲೇಖಕರ ವಿಳಾಸ:                 ಬೆಳವಾಡಿ ಅಶ್ವತ್ಥನಾರಾಯಣ, ನಿವೃತ್ತ ಆರಕ್ಷಕ ನಿರೀಕ್ಷಕರು (ನಿಸ್ತಂತು), ನಂ. ಇ.ಡಬ್ಲ್ಯು.ಎಸ್. ೭೯೫ (ಮಹಡಿ), ಇಪ್ಪತ್ತನೇ ಅಡ್ಡರಸ್ತೆ, ಕುವೆಂಪುನಗರ,       ಹಾಸನ - ೫೭೩೨೦೧.   ಸ್ಥಿರ ದೂರವಾಣಿ: ೦೮೧೭೨-೨೩೩೪೩೦

___________________________________

     ಹರಿತ್ಸನು ಸೂರ್ಯವಂಶದಲ್ಲಿ ಜನಿಸಿದ ಒಬ್ಬ ಪ್ರಖ್ಯಾತ ರಾಜ. ಹರಿತ್ಸ ಗೋತ್ರದಲ್ಲಿ ಜನಿಸಿದ ಬ್ರಾಹ್ಮಣರೆಲ್ಲಾ ಹರಿತ್ಸ ವಂಶಜರು. ಆಂಗೀರಸ, ಅಂಬರೀಶ, ಯುವನಾಶ್ವರು(ಯೌವನಾಶ್ವ) ಹರಿತ್ಸ ಗೋತ್ರದ ಪ್ರವರ್ತಕ ಋಷಿತ್ರಯರು. ಅಂಬರೀಶ ಮತ್ತು ಯುವನಾಶ್ವ (ಯೌವನಾಶ್ವ)ರೂ ಸಹ ಸೂರ್ಯವಂಶದಲ್ಲಿ ಜನಿಸಿದ ಪ್ರಖ್ಯಾತ ರಾಜರುಗಳು ಹಾಗೂ ಶ್ರೀರಾಮನ ಪೂರ್ವಜರೆಂದು ಶ್ರೀರಾಮನ ವಂಶಾವಳಿಯಿಂದ ತಿಳಿದು ಬರುವ ಸಂಗತಿ.

     ಅಂಬರೀಶನ ಮಗ ಮಂಧಾತ್ರಿ ಮತ್ತು ಅವನ ಮಗ ಯುವಾನಶ್ವ (ಯೌವನಾಶ್ವ). ಯುವನಾಶ್ವನ ಮಗನೇ ಹರಿತ್ಸ. ಇವರುಗಳ ಸಂತತಿಯೇ ಆಂಗೀರಸ - ಹರಿತ್ಸರು ಎಂದು ವಿಷ್ಣು ಪುರಾಣದಲ್ಲಿ ಉಲ್ಲೇಖಿತವಾಗಿದೆ.     ವಿಷ್ಣು ಪುರಾಣದ ಪ್ರಕಾರ ಹರಿಶ್ಚಂದ್ರನು ತ್ರಿಶಂಕುವಿನ ಮಗ. ಅವನ ಮಗ ರೋಹಿತಾಶ್ವ. ರೋಹಿತಾಶ್ವನ ಮಗನೇ ಹರಿತ್ಸ. ಅವನ ಮಗ ಚುಂಚು. ಅವನಿಗೆ ವಿಜಯ ಮತ್ತು ಸುದೇವ ಎಂಬ ಹೆಸರಿನ ಇಬ್ಬರು ಮಕ್ಕಳು. ಇದರಲ್ಲಿ ತಿಳಿಸಿರುವ ಹರಿತ್ಸರು ಪರಂಪರೆಯಲ್ಲಿ ದ್ವಿತೀಯ ತಲೆಮಾರಿನವರು.
     ಸೂರ್ಯವಂಶದ ರಾಜನಾದ ಯುವಾನಶ್ವ (ಯೌವನಾಶ್ವ)ನ ಮಗ ಹರಿತ್ಸ ಇಕ್ವಾಕುವಿನ ಸಂತಾನ. ಅವನ ಸಂತತಿಯವರೇ ಹರಿತ್ಸ - ಆಂಗೀರಸರು. ಲಿಂಗಪುರಾಣದಲ್ಲಿ ಹೇಳಿರುವಂತೆ ಯುವಾನಶ್ವನ (ಯೌವನಾಶ್ವ) ಮಗನೇ ಹರಿತ್ಸ. ಅವನ ಮಕ್ಕಳೇ ಹರಿತ್ಸರು. ಅವರು ಕ್ಷತ್ರಿಯ ವಂಶದಲ್ಲಿ ಜನಿಸಿ ನಂತರ ದ್ವಿಜರಾದ ಆಂಗೀರಸ ಋಷಿಗಳ ಅನುಯಾಯಿಗಳಾಗಿದ್ದರು. ಅಥವ ವಾಯುವಿನ ಪ್ರಕಾರ ಕ್ಷತ್ರಿಯ ಪರಂಪರೆಯಲ್ಲಿ ಜನಿಸಿ ದ್ವಿಜತ್ವಕ್ಕೆ ಏರಿ ಬ್ರಹ್ಮಜ್ಞಾನಿಗಳಾದ ಆಂಗೀರಸರ ಮಕ್ಕಳಾಗಿದ್ದರು. ಬಹುಶಃ ಇದರ ಅರ್ಥ ಕ್ಷತ್ರಿಯನಾಗಿ ಜನಿಸಿದ ಹರಿತ್ಸನನ್ನು ಆಂಗೀರಸರು ದ್ವಿಜತ್ವಕ್ಕೆ ಏರಿಸಿರಬೇಕು.

     ಇತರೇ ಕೃತಿಗಳಲ್ಲಿ ಹೇಳಿರುವಂತೆ, ಹರಿತ್ಸ ಎನ್ನುವ ಹೆಸರು ಒಬ್ಬ ಋಷಿಗೆ ಸಂಬಂಧಿಸಿದ್ದು ಅವನು ಚ್ಯವನನ ಮಗನೆಂದೂ ನೀತಿಸಂಹಿತೆಯ ಗ್ರಂಥವು ಅವನಿಂದ ರಚಿಸಲ್ಪಟ್ಟಿದೆ ಎಂಬ ಅಂಶ ತಿಳಿದು ಬರುತ್ತದೆ.
     ಹರಿತ್ಸನು ತನ್ನ ನೀತಿ ಸಂಹಿತೆಯ ಮೂಲ ಪ್ರತಿಯನ್ನು ಗದ್ಯ ರೂಪದಲ್ಲಿ ರಚಿಸಿದ್ದಾನೆ. ಆದರೆ ಆ ಮೂಲ ಪ್ರತಿಯು ಲಭ್ಯವಿಲ್ಲದ ಕಾರಣ ಈಗ ಪ್ರಚಲಿತವಿರುವ ಸಂಹಿತೆಯು ಮೂಲ ಪ್ರತಿಯ ಸಾರಾಂಶ ರೂಪದಲ್ಲಿದೆ. ನೀತಿ ಸಂಹಿತೆ ಛಂದೋಬದ್ಧತೆಯನು ಹಿಂದೂ ಧರ್ಮೀಯರು ಸಾಮಾನ್ಯವಾಗಿ ಆಚಾರ ಅಥವ ಧರ್ಮದ ಪ್ರಮಾಣವೆಂದು ಪರಿಗಣಿಸಿದ್ದಾರೆ. ಆನಾದರಣೀಯವೆನಿಸುವ ಯಾವ ನೈಸರ್ಗಿಕ ನಿಯಮಗಳೂ ಈ ನೀತಿ ಸಂಹಿತೆಯಲ್ಲಿ ಕಂಡು ಬರುವುದಿಲ್ಲ. ಈ ನೀತಿ ಸಂಹಿತೆಯು ಏಳು ಅಧ್ಯಾಯಗಳನ್ನು ಹಿಂದಿದ್ದು ನೂರಾ ತೊಂಬತ್ತನಾಲ್ಕು ದ್ವಿಪದಿಯ ಶ್ಲೋಕಗಳನ್ನು ಒಳಗೊಂಡಿದೆ.
     ರಾಜ ಅಂಬರೀಶ ಮತ್ತು ಋಷಿ ಮಾರ್ಕಂಡೇಯ ಇವರಿಬ್ಬರ ನಡುವೆ ನಡೆದ ಸಂವಾದ ಪ್ರಶ್ನೋತ್ತರ ರೂಪದಲ್ಲಿದ್ದು ವಿವಿಧ ಜಾತಿಯವರು ಅನುಸರಿಸಬೇಕಾದ ನೀತಿ ಅಥವ ಜಾತಿ ಧರ್ಮದ ಬಗ್ಗೆ ಅಂಬರೀಶನು ಪ್ರಶ್ನೆಗಳನ್ನು ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ಮಾರ್ಕಂಡೇಯ ಋಷಿಯು ಪೂರ್ವಾಚರಣೆಯಲ್ಲಿದ್ದ ನೀತಿ- ಜಾತಿ ಧರ್ಮಗಳ ಬಗ್ಗೆ ಹರಿತ್ಸ ಮತ್ತು ಋಷಿಗಳ ನಡುವೆ ನಡೆದ ಸಂಭಾಷಣೆಯನ್ನು ವಿವರಿಸುತ್ತಾನೆ.
     ಹರಿತ್ಸನಿಂದ ರಚಿಸಲ್ಪಟ್ಟ ನೀತಿಸಂಹಿತೆ ಗ್ರಂಥದ ಪ್ರಾರಂಭದ ಉಕ್ತಿಯ ಪ್ರಕಾರ ಹರಿತ್ಸ ಮತ್ತು ಮಾರ್ಕಂಡೇಯ ಋಷಿಯ ನಡುವೆ ಪ್ರಶ್ನೋತ್ತರ ರೂಪದಲ್ಲಿ ನಡೆದ ಸಂವಾದ ಸ್ಪಷ್ಟವಾಗುತ್ತದೆ. ಹರಿತ್ಸನು ತನ್ನ ನೀತಿ ಸಂಹಿತೆಯನ್ನು ಗದ್ಯ ರೂಪದಲ್ಲಿ ರಚಿಸಿರುವುದು ವೇದ್ಯವಾಗುತ್ತದೆ. ಹರಿತ ಸಂಹಿತೆಯೆಂದು ಕರೆಉಲ್ಪಡುವ ಈ ಗ್ರಂಥವು ಸಹಜವಾಗಿ ಪದ್ಯರೂಪದ ಗ್ರಂಥವಾಗಿ ಮಾರ್ಕಂಡೇಉ ಋಷಿಯಿಂದ ರಚಿಸಲ್ಪಟ್ಟಿದೆ. ಹರಿತ್ಸನಿಂದ ರಚಿಸಲ್ಪಟ್ಟ ಗದ್ಯರೂಪದ ಮೂಲ ಪ್ರತಿಯ ವಿವರಗಳ ಸಾರಾಂಶವನ್ನೆಲ್ಲಾ ಸಂಗ್ರಹಿಸಿ ಮಾರ್ಕಂಡೇಯ ಋಷಿಯು ಶ್ಲೋಕಗಳಲ್ಲಿ ರಚಿಸಿದ್ದಾನೆ.
     ತತ್ವಜ್ಞಾನಿ, ವೇದಾಂತಿ, ವಿಶಿಷ್ಠಾದ್ವೈತದ ಪ್ರವರ್ತಕರಾದ ಶ್ರೀ ರಾಮಾನುಜರು ಹರಿತ್ಸ ಗೋvದವರು. ಶ್ರೀ ವೈಷ್ಣವರು ಶ್ರೀ ರಾಮಾನುಜರನ್ನು ಅವರ ಪರಂಪರೆಯ ಮೂರನೇ ಹಾಗೂ ಪ್ರಮುಖ ಆಚಾರ್ಯರೆಂದು ಪರಿಭಾವಿಸುತ್ತಾರೆ.
        ಆಂಗೀರಸ - ಅಂಬರೀಶ - ಯುವಾನಶ್ವ(ಯೌವನಾಶ್ವ)  ಪ್ರವರದ ಹರಿತ್ಸ ಗೋತ್ರದ ವಂಶ ಪರಂಪರೆಯು ಸಹಸ್ರಾರು ವರ್ಷಗಳ ಇತಿಹಾಸವನ್ನು ಸ್ಪಷ್ಟವಾಗಿ ವಿವರಿಸುತ್ತದೆ.
-ಬೆಳವಾಡಿ ಅಶ್ವತ್ಥನಾರಾಯಣ
*****
HARITHA
From Wikipedia, the free encyclopedia

     Harit (Harita) Rishi was a sage of the Lakulish cult and was a devotee of Lord Shiva (Shri Eklingji). Harita was also the guru who taught Bappa Rawal of Guhilot (later to called Sisodia) the four cardinal duties for the service of the state:

1.     To follow the principles of Manav Dharma and preserve Vedic culture.
2.     To serve all God’s creations as a service to God, the creator of all life.
3.     To endeavour constantly to keep the human soul awakened and alive, in order that human beings would value the Dignity of Man.
4.     To help recognize Man’s special status in the hierarchy of God’s creations- the eternal principles underlying cosmic creation.
.
*****


ಕೆಳದಿ ಕವಿಮನೆತನದವರ ಪ್ರವರ
     ಕೆಳದಿ ಕವಿ ಮನೆತನದವರು ಹರಿತಸ ಗೋತ್ರಕ್ಕೆ ಸೇರಿದವರಾಗಿದ್ದು ಅವರು ಹೇಳುವ ಪ್ರವರ ಈ ರೀತಿ ಇರುತ್ತದೆ:
    
 ಆಂಗೀರಸ ಅಂಬರೀಶ, ಯೌವನಾಶ್ವ ತ್ರಯಾಋಷಯ ಪ್ರವರಾನ್ವಿತ ಹರಿತಸ ಗೋತ್ರ ಬೋಧಾಯನ ಸೂತ್ರ ಯಜುಃ:ಶಾಖಾ ಅಧ್ಯಾಯಿ . . . . . . . . . . . . . . ಶರ್ಮ ಅಹಂಭೋ ಅಭಿವಾದಯೇ

ಅರ್ಥ:  ಹರಿತಸ ಗೋತ್ರಕ್ಕೆ ಸೇರಿದ, ಮೂವರು ಋಷಿಗಳಾದ ಆಂಗೀರಸ, ಅಂಬರೀಶ, ಯೌವನಾಶ್ವರ ವಂಶದವನಾದ, ಯಜುರ್ವೇದದ ಬೋಧಾಯನ ಸೂತ್ರವನ್ನು ಪಾಲಿಸುವವನಾದ ನಾನು . . . . . . . . . . . . . ಶರ್ಮ ನಮಸ್ಕರಿಸುತ್ತೇನೆ.
*****
('ಕವಿಕಿರಣ'ದ ಡಿಸೆಂಬರ್, 2009ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ)

Thursday, June 9, 2011

ಸನ್ಮಾನ ಸಮಾರಂಭ



         ಇತ್ತೀಚೆಗೆ (ಜೂನ್ ೫, ೨೦೧೧ ) ಶಿವಮೊಗ್ಗದ ಬಡಗನಾಡು ಬ್ರಾಹ್ಮಣ ಸಂಘದ ವತಿಯಿಂದ ಕವಿ.ವೆಂ.ಸುರೇಶ್ ಹಾಗೂ ಎಸ್.ರೇಣುಕಾಂಬ ದಂಪತಿಗಳನ್ನು ಸನ್ಮಾನಿಸಲಾಯಿತು. ಅದರ ಕೆಲವು ಛಾಯಾಚಿತ್ರಗಳು :