ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Tuesday, August 2, 2011

ಸಾರ್ಥಕ - ಪ್ರೇರಕ - ಅರ್ಥಪೂರ್ಣ

ತೀರ್ಥಹಳ್ಳಿಯಲ್ಲಿ ನಡೆದ ಕೆಳದಿ ಕವಿ ಮನೆತನದವರ ಮತ್ತು ಬಂಧುಬಳಗದವರ ಚತುರ್ಥ ಸಮಾವೇಶದ ವರದಿ
     ದಿನಾಂಕ ೨೭-೧೨-೨೦೦೯ರ ಮುಂಜಾನೆ ಬಿದ್ದ ಅಕಾಲಿಕ ತುಂತುರು ಮಳೆಯಿಂದ ನೆನೆದ ಭೂಮಿ ತಂಪಾಗಿತ್ತು. ಡಿಸೆಂಬರ್ ತಿಂಗಳಾದರೂ ಚಳಿಯ ಹೆಸರಿರಲಿಲ್ಲ. ತೀರ್ಥಹಳ್ಳಿಯ ದೀಕ್ಷಿತರ ಕಾಶಿ ಕಲಾಭವನ ಕೆಳದಿ ಕವಿಮನೆತನದವರು ಹಾಗೂ ಬಂಧು ಬಳಗದವರನ್ನು ಸ್ವಾಗತಿಸಲು ಸಜ್ಜಾಗಿತ್ತು. ಒಬ್ಬೊಬ್ಬರಾಗಿ ಹಾಗೂ ಗುಂಪಿನಲ್ಲಿ ಬಂದವರನ್ನು ದೀಕ್ಷಿತ ಸಹೋದರರು ಮತ್ತು ಕುಟುಂಬ ವರ್ಗದವರು ಆತ್ಮೀಯವಾಗಿ ಸ್ವಾಗತಿಸಿದರು. ಎಲ್ಲರಿಗೂ ಉಪಾಹಾರವಾದ ನಂತರ ಬೆ.೧೦-೩೦ಕ್ಕೆ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು. ವೇದಿಕೆಗೆ ಆಹ್ವಾನಿಸಿಲಾಗಿದ್ದ ಶ್ರೀ ಮತ್ತು ಶ್ರೀಮತಿ ಶೇಷಾದ್ರಿ ದೀಕ್ಷಿತ್, ಶ್ರೀ ಮತ್ತು ಶ್ರೀಮತಿ ಸುಬ್ರಹ್ಮಣ್ಯ ದೀಕ್ಷಿತ್, ಶ್ರೀ ಕೆಳದಿ ಗುಂಡಾಜೋಯಿಸರು ಮತ್ತು ಶ್ರೀ ಕವಿ ನಾಗರಾಜಭಟ್ಟರು ವೇದಘೋಷಸಹಿತ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಆರಂಭಗೊಳಿಸಿದರು.

     ಪ್ರಾರಂಭದಲ್ಲಿ ೧೪-೦೭-೦೯ರಂದು ನಿಧನರಾದ ಕವಿ ಕುಟುಂಬದ ಅತ್ಯಂತ ಹಿರಿಯ ಸದಸ್ಯರಾಗಿದ್ದ ಶಿವಮೊಗ್ಗದ ಶ್ರೀ ಕವಿ ವೆಂಕಟಸುಬ್ಬರಾವ್ ಮತ್ತು   ೧೪-೦೫-೦೯ರಂದು ನಿಧನರಾದ ಹಿರಿಯರಾದ ಶಿಕಾರಿಪುರದ ಶ್ರೀಮತಿ ವಿನೋದಾಬಾಯಿ ಗೋಪಾಲರಾವ್ (ಕವಿ ಶ್ರೀಕಂಠಯ್ಯ ಮತ್ತು ಭಾಗೀರಥಮ್ಮನವರ ಪುತ್ರಿ)ರವರ ನಿಧನಕ್ಕೆ ಸಂತಾಪ ಮತ್ತು ಶ್ರದ್ಧಾಂಜಲಿ ಸೂಚಕವಾಗಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.
     ಕಾಶೀಬಾಯಿಯವರ ಸುಶ್ರಾವ್ಯ ಪ್ರಾರ್ಥನೆಯ ಬಳಿಕ ಕವಿ ಶ್ರೀಕಂಠರವರು ಆಗಮಿಸಿದ್ದ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಬಾಂಧವ್ಯಗಳ ಬೆಸುಗೆಗೆ ಇಂತಹ ಕಾರ್ಯಕ್ರಮಗಳು ಅತ್ಯಗತ್ಯವಾಗಿದ್ದು ಎಲ್ಲಾ ಬಂಧು ಬಳಗದವರು ಪೂರ್ಣ ಸಹಕಾರ ನೀಡಬೇಕೆಂದು ಕೋರಿದರು. ಅನಾರೋಗ್ಯದ ಕಾರಣ ಸಮಾರಂಭಕ್ಕೆ ಬರಲಾಗದಿದ್ದ ಹಿರಿಯರಾದ ಶ್ರೀ ಸಾ.ಕ. ಕೃಷ್ಣಮೂರ್ತಿಯವರ ಸಂದೇಶವನ್ನು ಓದಿ ಹೇಳಲಾಯಿತು.


     ಶ್ರೀ ಕ.ವೆಂ. ನಾಗರಾಜ್‌ರವರು ಮಾತನಾಡುತ್ತಾ ಕೌಟುಂಬಿಕವಾಗಿ ಅಲ್ಲದೆ ಐತಿಹಾಸಿಕವಾಗಿ ಸಹ ಈ ಸಮಾವೇಶ ಮಹತ್ವದ್ದಾಗಿದೆ; ಎಷ್ಟೋ ಜನಕ್ಕೆ ಹೆಚ್ಚೆಂದರೆ ೩-೪ ತಲೆಮಾರುಗಳ ವಿವರ,  ಅದೂ ಅಪೂರ್ಣವಾಗಿ, ಗೊತ್ತಿರಬಹುದು. ಆದರೆ ೧೨ ತಲೆಮಾರುಗಳ ವಿವರ ಲಭ್ಯವಿರುವ ಕೆಳದಿ ಕವಿಮನೆತನ ವಿಶಿಷ್ಟವಾದುದು ಎಂದರು. ನಮ್ಮ ಪೂರ್ವಜರು ಸಾಮಾನ್ಯರಂತೆ ಜೀವಿಸಿದ್ದರೆ ಈ ವಿವರ ತಿಳಿಯುತ್ತಿರಲಿಲ್ಲ. ಕಲೆ, ಸಾಹಿತ್ಯ, ಆಡಳಿತ, ಧಾರ್ಮಿಕ ರಂಗಗಳಲ್ಲಿ ಉತ್ತಮ ಸಾಧನೆ ಮಾಡಿ ತಮ್ಮ ಹೆಜ್ಜೆ ಗುರುತನ್ನು ಬಿಟ್ಟು ಹೋಗಿದ್ದರಿಂದಲೇ ಈ ವಿವರ ಲಭ್ಯವಾದುದನ್ನು ಮರೆಯದೆ, ನಾವುಗಳೂ ಸಹ ನಮ್ಮಗಳ ಗುರುತು ಮುಂದಿನ ಪೀಳಿಗೆಗೆ ಉಳಿಯುವಂತೆ ಸಾಧಕರಾಗಬೇಕೆಂದು ಕರೆಯಿತ್ತರು. ಈ ಸಮಾವೇಶಗಳಲ್ಲಿ ಕವಿ ಕುಟುಂಬಗಳಲ್ಲದೆ ಅವರ ಹೆಣ್ಣು ಮಕ್ಕಳು ಸೇರಿರುವ ಕುಟುಂಬಗಳನ್ನು ಮತ್ತು ಬಂಧು ಬಳಗದವರನ್ನು ಆಹ್ವಾನಿಸುತ್ತಿರುವುದು ತುಂಬಾ ಉತ್ತಮ ಮತ್ತು ಔಚಿತ್ಯಪೂರ್ಣವೆಂದ ಅವರು, ಹೆಣ್ಣುಮಕ್ಕಳಿಗೆ ತಮ್ಮ ತವರಿನ ಬಗ್ಗೆ ಅಭಿಮಾನವಿದ್ದು, ತವರಿನವರ ಏಳಿಗೆಗೆ ಹರ್ಷ ಪಡುತ್ತಾರೆಂದರು. ಮೊದಲ ಎರಡು ವಾರ್ಷಿಕ ಸಮಾವೇಶಗಳನ್ನು ಕವಿ ಕುಟುಂಬಗಳವರು ಆಯೋಜಿಸಿದ್ದರೆ, ಹಿಂದಿನ ಮತ್ತು ಈಗಿನ ಸಮಾವೇಶಗಳನ್ನು ಕವಿಮನೆತನದ ಹೆಣ್ಣುಮಕ್ಕಳು ಸೇರಿರುವ ಕುಟುಂಬಗಳವರು ಆಯೋಜಿಸಿರುವುದಕ್ಕೆ ಕವಿ ಮನೆತನದ ಹೆಣ್ಣು ಮಕ್ಕಳ ತವರಿನ ಅಭಿಮಾನ ಮತ್ತು ವಾಂಛಲ್ಯವೇ ಕಾರಣವಲ್ಲದೆ ಮತ್ತೇನೂ ಅಲ್ಲವೆಂದು ಶ್ಲಾಘಿಸಿದರು. ಕವಿಕಿರಣ ಪತ್ರಿಕೆಯ ಉದ್ದೇಶ ಉತ್ತಮ ಬಾಂಧವ್ಯ ಮತ್ತು ಸಜ್ಜನಶಕ್ತಿಯ ಜಾಗರಣಕ್ಕೆ ಪ್ರೇರಿಸುವುದೇ ಆಗಿದೆಯೆಂದರು.

    ಕವಿಕಿರಣ ಪತ್ರಿಕೆಯ ಡಿಸೆಂಬರ್ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಶ್ರೀ ಸುಬ್ರಹ್ಮಣ್ಯ ದೀಕ್ಷಿತರು ಸಮಾರಂಭಕ್ಕೆ ಹಾಜರಾದ ಎಲ್ಲರಿಗೂ ಆಭಾರ ವ್ಯಕ್ತಪಡಿಸುತ್ತಾ  ಇಂತಹ ಉತ್ತಮ ಕೆಲಸಕ್ಕೆ  ತಮ್ಮ ಮತ್ತು ತಮ್ಮ ಸಹೋದರರುಗಳ ಸಹಕಾರ ಸದಾ ಇರುವುದೆಂದು ತಿಳಿಸಿದರು.


     ಶ್ರೀ ಕಾಶಿ ಶೇಷಾದ್ರಿ ದೀಕ್ಷಿತರು ಮಾತನಾಡುತ್ತಾ ಮಾನವ ಪ್ರಾಣಿಗಿಂತ ಭಿನ್ನವಾಗಿದ್ದು, ಕೇವಲ ತಿಂದು, ಉಂಡು ಸಾಯುವುದಾದಲ್ಲಿ ಪ್ರಾಣಿಗೂ ಅವನಿಗೂ ವ್ಯತ್ಯಾಸವಿರುವುದಿಲ್ಲ; ಸಾಯುವ ಮುನ್ನ ಏನನ್ನಾದರೂ ಸಾಧಿಸಬೇಕೆಂದೂ, ಜೀವನದಲ್ಲಿ ಯಾವುದಾದರೂ ಗುರಿ ಇಟ್ಟುಕೊಂಡು ಸಾಧನೆಯ ಮಾರ್ಗದಲ್ಲಿ ಮುನ್ನಡೆಯಬೇಕೆಂದೂ ಕರೆಯಿತ್ತರು. ತಮ್ಮ ೨೬ನೆಯ ವಯಸ್ಸಿನಲ್ಲಿ ಸೈಕಲ್ಲಿನಲ್ಲಿ ೩ವರ್ಷ, ೩ತಿಂಗಳುಗಳ ಕಾಲ ಅಖಿಲ ಭಾರತ ಪ್ರವಾಸ ಮಾಡಿದ ಬಗ್ಗೆ ತಮ್ಮ ಅನುಭವ ಹಂಚಿಕೊಂಡುದು ಅವಿಸ್ಮರಣೀಯವಾಗಿತ್ತು. ಸುಮಾರು ೫೫ಸಾವಿರ ಕಿಲೋಮೀಟರ್ ದೂರವನ್ನು ಸೈಕಲ್‌ನಲ್ಲಿ ಕ್ರಮಿಸಿದ ಸಂದರ್ಭದಲ್ಲಿ ಆದ ಕೆಲವು ಅನುಭವಗಳನ್ನು ತಿಳಿಸಿದಾಗ ಎಲ್ಲರೂ ವಿಸ್ಮಿತರಾದರು. ೩ವರ್ಷಗಳಿಗೂ ಹೆಚ್ಚಿನ ಸಮಯದ ಪ್ರವಾಸದ ಬಗ್ಗೆ ಒಂದು ಗಂಟೆಯಲ್ಲಿ ತಿಳಿಸುವುದು  ಕಷ್ಟವಾದರೂ ತಿಳಿಸಿದಷ್ಟು ಸಾಧನೆಯ ವಿವರ ಕೇಳಿದವರಿಗೆ ತಾವೂ ಏನನ್ನಾದರೂ ಸಾಧಿಸಬೇಕೆಂಬ ಪ್ರೇರಣೆ ಆಗಿರಲಿಕ್ಕೂ ಸಾಕು. ಈ ಅಪ್ರತಿಮ ಸಾಧನೆ ಬಗ್ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಯಿತು. ಇವರ ಸಾಧನೆ ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿದ್ದು, ಸುಮಾರು ೩೦ ವರ್ಷಗಳ ನಂತರವಾದರೂ ಸರ್ಕಾರ ಸಹ ಇತ್ತೀಚೆಗೆ ನವದೆಹಲಿಯಲ್ಲಿ ಇವರನ್ನು ಸನ್ಮಾನಿಸಿದ ಸಂಗತಿ ತಿಳಿದು ಎಲ್ಲರಿಗೂ ಸಂತೋಷವಾಯಿತು. ಇವರು ಪ್ರವಾಸಕ್ಕೆ ಬಳಸಿದ್ದ ಸೈಕಲ್, ಪ್ರವಾಸಕಾಲದ ಭಾವಚಿತ್ರಗಳು, ಸನ್ಮಾನ, ಪ್ರಶಸ್ತಿಗಳನ್ನು ಸಮಾವೇಶದ ಸ್ಥಳದಲ್ಲಿ ಪ್ರದರ್ಶಿಸಲಾಗಿದ್ದು ಇವು ಎಲ್ಲರಿಗೂ ಪ್ರೇರಣೆ ನೀಡಿತು ಎಂಬುದರಲ್ಲಿ ಸಂಶಯವಿಲ್ಲ.


     ಕವಿ ನಾಗರಾಜಭಟ್ಟರು ಮಾತನಾಡಿ ಕವಿ ಮನೆತನದ ಪೂರ್ವಜರು ಸಾಧಕರಾಗಿದ್ದು ಅವರ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬರಬೇಕೆಂದು ಕರೆ ನೀಡಿದರು.
     ಸಂಶೋಧನಾ ರತ್ನ ಶ್ರೀ ಕೆಳದಿ ಗುಂಡಾಜೋಯಿಸರು ಕೆಳದಿ ಕವಿ ಮನೆತನ, ಕೆಳದಿ ಜೋಯಿಸ್ ಮನೆತನ ಹಾಗೂ ದೀಕ್ಷಿತ್ ಕುಟುಂಬಗಳ ನಡುವೆ ಇರುವ ಸಂಬಂಧ, ಪರಸ್ಪರರ ಅಭಿವೃದ್ಧಿಗೆ ಪೂರಕರಾಗಿರುವ ಕುರಿತು ದಾಖಲೆಗಳ ಸಹಿತ ಪ್ರಸ್ತುತ ಪಡಿಸಿದ್ದು ಸಭೆಗೆ ಮೆಚ್ಚುಗೆಯಾಯಿತು.
   
    ಶ್ರೀ ಕವಿ ಸುರೇಶ್‌ರವರು ಮರೆಯಲಾಗದ ಕೆಳದಿ ಸಾಮ್ರಾಜ್ಯ ಪುಸ್ತಕವನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ್ದಕ್ಕಾಗಿ ಬಂದ ಸಂಭಾವನೆಯ ಅರ್ಧಭಾಗವನ್ನು ಕವಿಮನೆತನದ ಮಂಗಳನಿಧಿಗೆ ನೀಡುವುದಾಗಿ ಘೋಷಿಸಿದ್ದು ಸಭೆ ಇವರನ್ನು ಅಭಿನಂದಿಸಿತು.
     ದೀಕ್ಷಿತ್ ಸಹೋದರರು ಸನ್ಮಾನದ ಸಲುವಾಗಿ ದೆಹಲಿಗೆ ಹೋಗಿದ್ದ ಸಂದರ್ಭದಲ್ಲಿ ಕಾಶಿ ಸೇರಿದಂತೆ ಉತ್ತರ ಭಾರತದ ಹಲವು ಪುಣ್ಯಕ್ಷೇತ್ರಗಳಿಗೆ ಸಹ ಹೋಗಿ ಬಂದಿದ್ದರ ನಿಮಿತ್ತ ಕಾಶಿ ಸಮಾರಾಧನೆ ಸಹ ಇದೇ ದಿನ ಇಟ್ಟುಕೊಂಡಿದ್ದು, ಎಲ್ಲಾ ಅತಿಥಿಗಳಿಗೆ ಸುಗ್ರಾಸ ಭೋಜನ ಏರ್ಪಾಡಾಗಿತ್ತು.
     ಶ್ರೀಮತಿಯರಾಧ ಹೇಮಾ ಮಾಲತೇಶ್, ಸುಮನಾ ವೆಂಕಟೇಶ್, ಕಾಶೀಬಾಯಿ, ಸುಕನ್ಯಾ ಸೋಮಶೇಖರ್, ಮೊದಲಾದವರು, ಶ್ರೀಯುತ ಮಾಲತೇಶ್, ವೆಂಕಟೇಶ ಜೋಯಿಸ್ ಇವರುಗಳು ಪ್ರಧಾನ ಸೂತ್ರಗಾರರಾಗಿ ನಡೆಸಿಕೊಟ್ಟ ಮನರಂಜನಾ ಕಾರ್ಯಕ್ರಮಗಳು ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದಲ್ಲದೆ ಸೃಜನಾತ್ಮಕವಾಗಿದ್ದವು. ಆ ಸಂದರ್ಭದಲ್ಲಿ ಸ್ವತಃ ರಚಿಸಿ ಹಾಡಿದ ಶ್ರೀಮತಿ ಹೇಮಾ ಮಾಲತೇಶ ಮತ್ತು ಸಂಗಡಿಗರ ಹಾಡುಗಳಿಗೆ ನೃತ್ಯ ಬಾರದ ಸಭಿಕರುಗಳೂ ವಯಸ್ಸಿನ ತಾರತಮ್ಯವಿಲ್ಲದೆ ಹೆಜ್ಜೆ ಹಾಕಿ ನರ್ತಿಸಿದ್ದು ಬಾಂಧವ್ಯಗಳು ಗಟ್ಟಿಗೊಳ್ಳುತ್ತಿರುವುದರ ಸಂಕೇತವಾಗಿತ್ತಲ್ಲದೆ, ಸಮಾವೇಶವನ್ನು ಅರ್ಥಪೂರ್ಣ ಎನ್ನಿಸಿತ್ತು. ಆಶುಭಾಷಣ ಸ್ಪರ್ಧೆಯಲ್ಲಿ ಆಸಕ್ತಿಯಿಂದ ಹಲವರು ಭಾಗವಹಿಸಿದ್ದು ವಿಜೇತರಿಗೆ ಬಹುಮಾನ ನೀಡಲಾಯಿತು.

     ಮುಂದಿನ ಸಮಾವೇಶ: ತಮ್ಮ ತಾಯಿ ದಿ. ವಿನೋದಾಬಾಯಿ ಗೋಪಾಲರಾವ್‌ರವರ ನೆನಪಿನಲ್ಲಿ ಮುಂದಿನ ವಾರ್ಷಿಕ ಸಮಾವೇಶವನ್ನು ತಾವು, ತಮ್ಮ ಸಹೋದರರು ಮತ್ತು ಕುಟುಂಬವರ್ಗದವರು ಶಿಕಾರಿಪುರದಲ್ಲಿ ದಿನಾಂಕ ೨೬-೧೨-೨೦೧೦ರಂದು ನಡೆಸಿಕೊಡುವುದಾಗಿ ಘೋಷಿಸಿದ ಶ್ರೀ ಸೋಮಶೇಖರ್ ಮತ್ತು ಕಾಶೀಬಾಯಿರವರನ್ನು ಸಭೆ ಅಭಿನಂದಿಸಿತು. ಶ್ರೀ ಕಾಶಿ ಶೇಷಾದ್ರಿ ದೀಕ್ಷಿತರ ತಾಯಿ ದಿ. ಶ್ರೀಮತಿ ಜಯಲಕ್ಷ್ಮಮ್ಮ ಮತ್ತು ದಿ.ಶ್ರೀಮತಿ ವಿನೋದಾಬಾಯಿಯವರಿಬ್ಬರೂ ದಿ.ಕವಿ ಶ್ರೀಕಂಠಯ್ಯ-ಭಾಗೀರಥಮ್ಮನವರ ಹೆಣ್ಣುಮಕ್ಕಳು ಎಂಬುದು ಗಮನಿಸಬೇಕಾದ ಸಂಗತಿ.

     ಕುಮಾರಿ ಸಿಂಧು ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರೂಪಣೆ ಮಾಡಿದಳು. ಕೆಳದಿ ವೆಂಕಟೇಶ ಜೋಯಿಸ್ ಎಲ್ಲರಿಗೂ ಆಭಾರ ವ್ಯಕ್ತಪಡಿಸಿದರು. ಆಹ್ವಾನ ಪತ್ರಿಕೆ ಮುದ್ರಿಸಿ ಎಲ್ಲರಿಗೂ ತಲುಪುವ ವ್ಯವಸ್ಥೆ ಮಾಡಿದ್ದಲ್ಲದೆ ಪೂರ್ವ ತಯಾರಿ ಬಗ್ಗೆ ಶ್ರಮ ವಹಿಸಿದ ಕವಿ ಶ್ರೀಕಂಠ, ಗುರುಮೂರ್ತಿ, ದತ್ತಾತ್ರಿ ಸಹೋದರರನ್ನು ಅಭಿನಂದಿಸಲಾಯಿತು. ಸ್ಮರಣೀಯವಾಗಿ ಸಮಾವೇಶವನ್ನು ಆಯೋಜಿಸಿದ ದೀಕ್ಷಿತ್ ಸಹೋದರರುಗಳು, ಅವರ ಕುಟುಂಬದವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕವಿಕಿರಣ ಪತ್ರಿಕೆಯ ಮುಂದಿನ ಸಂಚಿಕೆ ಪ್ರಾಯೋಜಕರಾದ ಶ್ರೀ ಬಿ.ವಿ. ಹರ್ಷ ಮತ್ತು ಕುಟುಂಬದವರನ್ನು ಸಭೆ ಅಭಿನಂದಿಸಿತು. ಸಾಂಸ್ಸೃತಿಕ ಕಾರ್ಯಕ್ರಮಕ್ಕೆ ಕಳೆಕೊಟ್ಟವರು, ಕವಿ ಮನೆತನದ ಮಂಗಳನಿಧಿಗೆ ದೇಣಿಗೆ ನೀಡಿದವರು, ಸಮಾವೇಶವನ್ನು ಅರ್ಥಪೂರ್ಣಗೊಳಿಸಲು ಸಹಕರಿಸಿದವರು ಎಲ್ಲರನ್ನೂ ಅಭಿನಂದಿಸುವುದರೊಂದಿಗೆ ಸಮಾವೇಶ ಸಫಲ ಅಂತ್ಯ ಕಂಡಿತು. ದೀಕ್ಷಿತ್ ಕುಟುಂಬವರ್ಗದ ಆತಿಥ್ಯ ಮತ್ತು ಸಮಾವೇಶದ ಮಧುರ ನೆನಪುಗಳೊಂದಿಗೆ ಸಾಯಂಕಾಲದ ವೇಳೆಗೆ ಎಲ್ಲರೂ ತೀರ್ಥಹಳ್ಳಿಯಿಂದ ತೆರಳಿದರು.
******************
('ಕವಿಕಿರಣ'ದ ಜೂನ್, 2010ರ ಸಂಚಿಕೆಯಿಂದ).

No comments:

Post a Comment