ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Sunday, March 6, 2011

ಪರಸತಿಮೋಹ

ತಾಳ: ಮಿಶ್ರಛಾಪು                               ರಾಗ: ದೇಶೀ

ಎಲ್ಲಿ ಕಲಿತೆಯೋ ಇಂಥಾ ಜಾಲೆಗಳನು ಆ
ಲಲ್ಲೆಗಾರತಿಯ ಕೂಡಾಡಿ ಬಂತದಕೇನು                                   || ಪ ||

ಅವಳ ಕುರುಳಿವಳ ಮುಗುಳ್ನಗೆಯನೆ ಬಯಸುವುದು
ಇವಳ ನಯನಗಳವಳ ಮುದ್ದು ಮೊಗವಾ
ಅವಳಕ್ಷಿ ಇವಳ ತೊಳ್ಗಳನೆಂದು ನಿನ್ನ ಸಖಿ
ವಿವರಿಸಿ ಬರೆದುದ ನೀನೋಡಿದುದ ಸಖಿ ಪೇಳ್ದ                          || 1 ||

ತರುಣಿ ಹಾರವನು ಮತ್ತೋರ್ವಳುಂಗುರವನು
ಸರ್ವಾಭರಣವ ಧರಿಸಿದಳೋರ್ವಳು
ಭರದಿ ಮೂವರೊಳಗಾರನು ಕಳುಹಲೆಂದು ಸಖಿ
ಬರೆಯಲದ ನೀನೋಡಿಕೊಂಡುದನೆ ಸಖಿ ಪೇಳ್ದ                        || 2 ||

ಇನ್ನಾದರೆಯು ಪರಸತಿಯರ ಬೇಟವ ಬಿಟ್ಟು
ನಿನ್ನ ನಂಬಿದಳೆಂದು ಮನಕೆ ತಂದು
ಎನ್ನ ಕರದೊಳಗೆ ಕರವಿಟ್ಟು ಮನ್ನಿಸೋ ಕೆಳದಿ
ಪನ್ನಗಾಭರಣ ಶ್ರೀ ರಾಮೇಶಲಿಂಗ                                         || 3 ||

ಬಾಲೆಯರ ಆಶೀರ್ವಾದದ ಹಾಡು

ತಾಳ: ಮಿಶ್ರಛಾಪು                                      ರಾಗ: ತೋಡಿ

ಶ್ರೀ ಗಣಪತಿಯ ಪಾದಾಬ್ಜಕೆ ನಮಿಸಿ
ರಾಗದಿಂದಲಿ ಶಾರದೆಯ ಸ್ಮರಿಸಿ
ನಾಗಭೂಷಣನ ಪದಾಬ್ಜಯುಗಳಕೆ ತಲೆ
ವಾಗಿ ಬಾಲೆಯರಾಶೀರ್ವಾದದ ಪದಗಳ
ರಾಗದಿ ಪಾಡಿ ಪೊಗಳುವೆ                                                           || 1 ||

ಸಾಲಿ ಸೀರೆಯನುಟ್ಟು ಸರಮುತ್ತಕಟ್ಟು
ಬಾಲಕಿಯರೊಳು ಕಟ್ಟಾಣಿ ನೀನಾಗು
ಮೇಲೆನಿಪಷ್ಟಪುತ್ರರನು ಪಡೆದು ಸುಖಿ
ಬಾಳು ಸ್ತ್ರೀಯರಿಗೆಲ್ಲಾ ದೊರೆಯಾಗು
ಶ್ರೀ ಮೈಲಾರಲಿಂಗನ ಕೃಪೆಯಿಂದಾ                                             || 2 ||

ಪಲ್ಲಕ್ಕಿಯ ಸಾನಂದದೊಳೇರು
ಹಲ್ಲಣಿಸಿದ ಕರಿತುರಗವನೇರು
ಎಲ್ಲಾಭರಣವನಿಟ್ಟು ಸುಖದಿಪ್ರಾಣ
ದೊಲ್ಲಭಸಹಿತ ಸಂತೋಷದೊಳಿರು ಶ್ರೀ
ಕೊಲ್ಲೂರ ಮೂಕಾಂಬೆಯ ಕೃಪೆಯಿಂದಾ                                        || 3 ||

ಚಂದ್ರಕಸ್ತುರಿಯ ತಿಲಕಗಳನಿಟ್ಟು
ಚಂದದಿ ಕುಂಕುಮ ರೇಖೆಯನಿಟ್ಟು
ಇಂದೀವರನೇತ್ರಕೆ ಕಪ್ಪಿಟ್ಟು ಅ
ಚಂದ್ರಾರ್ಕವು ಸುಖಬಾಳು ಶೃಂಗೇರಿಯ
ಚಂದ್ರಮೌಳೀಶನ ಕೃಪೆಯಿಂದಾ                                                   || 4 ||

ಅರಿಶಿನ ಚೂರ್ಣವನನುಲೇಪಿಸುತ
ಪರಿಮಳಗಂಧವ ಪಸರಿಸಿಕೊಳುತ
ಕರಿಯಮಣಿಯ ಮುತ್ತಿನಸರಗಳನಿಟ್ಟು
ಪರಮಸಂತೋಷದೊಳಿರು ಶ್ರೀ ಹಂಪೆಯ
ವಿರೂಪಾಕ್ಷನ ಕೃಪೆಯಿಂದಾ                                                         || 5 ||

ಪರಿಮಳಿಸುವ ಪುಷ್ಪಸರಗಳ ಮುಡಿದು
ಗುರಿಹಿರಿಯರ ಆಶೀರ್ವಾದವ ಪಡೆದು
ಹರುಷದಿ ಪುತ್ರಪೌತ್ರರ ಸಲಹುತ ಪತಿ
ಚರಣಸೇವೆಯ ಮಾಡಿ ಸುಖಮಿರು ಕುಕ್ಕೆಯ
ವರ ಸುಬ್ರಹ್ಮಣ್ಯನ ಕೃಪೆಯಿಂದಾ                                                 || 6 ||

ಸರಸ್ವತಿಯಂತೆ ವಿದ್ಯಾವಂತೆಯಾಗು
ಸಿರಿಯಂತೆ ಸೌಭಾಗ್ಯವಂತೆ ನೀನಾಗು
ಅರುಂಧತಿಯಂತೆ ಪತಿವ್ರತೆಯಾಗುತ
ಪರಮಾನಂದಗೊಳಿರು ಶ್ರೀ ಕೆಳದಿಯ
ಪುರದ ರಾಮೇಶನ ಕೃಪೆಯಿಂದಾ                                                  || 7 ||

Saturday, March 5, 2011

ವಿಘ್ನೇಶ್ವರ ಪ್ರಾರ್ಥನೆ


ಆವ ಕಾರ್ಯಕೂ ಮುಂಚಿನ ಪೂಜೆ ನಿಮ್ಮ
ತಾಯಿ ತಂದೆಯು ಕಲಿಸಿದ ವೋಜೆ                                             || ಪ ||

ಜಾತಕರ್ಮಕೆ ನಾಮಕರಣಕೆ ಚೌಲಕೆ
ಸಾತಿಶಯಾಕ್ಷರ ಪ್ರಾರಂಭಕೆ
ನೂತನ ವಿದ್ಯಾರಂಭಕೆ ಮುಂಜಿಗೆ
ಯಾತಕೂ ಶ್ರೀ ಗಣಪತಿ ಜಯ ಜಯವೆಂದೂ                                 || 1 ||

ಮದುವೆಗೆ ಋತುಶಾಂತಿಗೆ ಸೀಮಂತಕೆ
ಮುದದಿಂದ ಜನನವ ಬರೆವುದಕೆ
ಸದಮಲ ಯಜ್ಞಾರಂಭಕೆ ಸಮರಕೆ
ಮೊದಲೇ ಶ್ರೀ ವಿಘ್ನೇಶ್ವರ ಜಯ ಜಯವೆಂದೂ                                || 2 ||

ದಾನಕೆ ಧರ್ಮಕೆ ಪರ ಉಪಕಾರಕೆ
ಜ್ಞಾನಮಾರ್ಗಕೆ ಗಾನಕೆ ಗೀತೆಗೆ
ನಾನಾವಿಧ ಸುವ್ರತ ತೀರ್ಥಯಾತ್ರೆಗೆ
ನೀನೆ ಗತಿ ಗಣಪತಿ ಜಯ ಜಯವೆಂದೂ                                        || 3 ||

ಕೆರೆ ಕಾಲುವೆ ಕೂಪಗಳ ವಿಸ್ತಾರಕೆ
ಸುರಗೃಹ ರಥ ಉತ್ಸವ ಪೂಜೆಗೆ
ಸರಸ ಸರೋವರಗಳ ನಿರ್ಮಾಣಕೆ
ಸಿರಿ ಗಣಪತಿ ಪಾವನಮೂರ್ತಿ ಜಯವೆಂದೂ                                 || 4 ||

ಹರ ನಿಮ್ಮ ಪೂಜಿಸಿ ಪುರಮೂರ ಜಯಿಸಿದ
ಗರುಡಗೆ ಅಮೃತವು ಸಿದ್ದಿಸಿತು
ವರರಾಮಚಂದ್ರ ನಿಮ್ಮಡಿಯ ಪೂಜಿಸಿ ದಶ
ಶಿರನ ಗೆಲಿದನೆನೆ ಗಣಪತಿ ಜಯವೆಂದೂ                                      || 5 ||

ದ್ವಾಪರಯುಗದಲಿ ಧರ್ಮರಾಯನು ನಿಮ್ಮ
ನೇ ಪೂಜಿಸಿ ಕೌರವರ ಗೆಲಿದಾ
ಭೂಪರ ಜೈಸಿ ತುರಗವ ತಂದ ಸಾಂಬನು
ಶ್ರೀಪತಿನುತ ಗಣಪತಿ ಜಯ ಜಯವೆಂದೂ                                    || 6 ||

ವರದಾನದಿಯ ತೀರವಾಸ ಶ್ರೀ ಕೆಳದಿಯ
ಪುರವರಾಧೀಶ ರಾಮೇಶ್ವರನ
ಪರಮಮೋಹದ ಪುತ್ರ ಪಾವನತರಗಾತ್ರ
ವರದ ಶ್ರೀ ಗಣಪತಿ ಜಯ ಜಯ ಜಯವೆಂದೂ                               || 7 ||


 [ನಾಟರಾಗದಲ್ಲಿ ನುಡಿಸಬಹುದಾಗಿದೆ: ಆದಿತಾಳ]

Wednesday, March 2, 2011

ಬಾಲಕರ ಆಶೀರ್ವಾದದ ಪದ

ರಾಗ || ನೀಲಾಂಬರಿ

ಅನ್ನದಾನವನ್ನೆ ಮಾಡು ಕನ್ಯದಾನವನ್ನೆ ಮಾಡು
ನಿನ್ನ ನಂಬಿದರ ಪೊರೆದುನ್ನತ ಹರ್ಷದಿ ಬಾಳು
ಸನ್ನುತ ಸರ್ವಲೋಕಗಳನ್ನು ರಕ್ಷಿಸುವನಾಗು ಪ್ರ-
ಸನ್ನ ಮೂರುತಿಯಾಗು
ರನ್ನದ ರಾಶಿಗಳನ್ನು ಚಿನ್ನದ ಆಭರಣಗಳನ್ನು
ಭೂಸುರರಿಗಿತ್ತು ಮನ್ನಿಸು ಉದಾರನಾಗು
ಮನ್ನೆಯರೆಲ್ಲರು ಬಂದು
ನಿನ್ನನೋಲೈಸಲೆಂದು ಅಪರ್ಣೆ ಪರಸಿದಳು                                   || 1 ||

ಕೋಟಿ ಗೋದಾನವ ಮಾಡು ಸಾಟಿಯಿಲ್ಲದಂಥಾ ಪಂಚ
ಕೋಟಿ ಗಜದಾನ ಶಟಕೋಟಿಯಶ್ವದಾನಗಳ
ಮೀಟಾದ ಬ್ರಾಹ್ಮರಿಗಿತ್ತು ಕೀರ್ತಿವಂತನಾಗು ಕಿ-
ರೀಟಿ ಶೌರ್ಯದೊಳಾಗು ಮೀಟಾದ ಮಂತ್ರಿಗಳ ಕಿ-
ರೀಟ ರತ್ನಕಾಂತಿಗಳ ಕೋಟಿ ನಿನ್ನ ಪಾದದಲ್ಲಿ
ಧಾಟಿಯಾಗಿರುವನಾಗು
ಲೂಟಿಸಿ ವೈರಿಗಳನು ಗೋಟುಗೊಳಿಸುವ ಶಶಿ
ಜೂಟ ಭಕ್ತನಾಗು                                                                     || 2 ||

ಇತ್ತೆರದೆ ಬೀಸುತಿಹ ಮುತ್ತಿನ ಚಾಮರ ಶ್ವೇತ
ಛ್ಛತ್ರ ಸೀಗುರಿಗಳ ಮೊತ್ತದ ಸಾಲೊಳಗೆ ಒ-
ಪ್ಪುತ್ತಲಿರುವವನಾಗು ಸತ್ಯವಂತನಾಗು ಸುವ್ರತ ನೀನಾಗು
ಪೆತ್ತವರು ನೋಡಿ ನಲಿವುತ್ತಿರಲು ಭೂಸುರರು
ಮುತ್ತಿನಕ್ಷತೆಯನಾಂತು
ಪೃಥ್ವಿಯ ವೊಳಗೆ ಲ್ಲ್ಲಾ ಸ-
ರ್ವೋತ್ತಮ ಪುರುಷನಾಗೆನುತ್ತ
ಮಸ್ತಕದಿ ತಳುವುತ್ತ ಪರಸಿದರು                                                  || 3 ||

ಇಂದ್ರನಾಗು ಭೋಗದೊಳು ಸತ್ಯವಾಕ್ಯದೊಳು ಹರಿ-
ಶ್ಚಂದ್ರನಾಗು ಪಾಲನೆಯ ಮಾಡುವುದರೊಳಗೆ ಉ-
ಪೇಂದ್ರನಾಗು ಬುದ್ಧಿ ಕೌಶಲದೊಳು ತಿಳಿಯಲು ನಾ-
ಗೇಂದ್ರ ನೀನಾಗು
ಚಂದ್ರನಾಗು ಶಾಂತಿಯೊಳಗೆಂದು ವಂದಿಮಾಗಧರ
ವೃಂದ ಕರವೆತ್ತಿ ಜಯವೆಂದು ಪೊಗಳುತ್ತಿರಲಾ-
ಚಂದ್ರಾರ್ಕವು ಸೌಖ್ಯದಿ ಬಾಳೆಂದು ಸಾನಂದದೊಳಾಗ
ಇಂದಿರೆ ಪರಸಿದಳು                                                                 || 4 ||

ಧೀರನಾಗುದಾರನಾಗು ಸೂರಿಜನವಾರಕೆ ಮಂ-
ದಾರನಾಗು ಸಂಗರ ಶೂರನಾಗು ವೈರಿ ಜ-
ಝ್ಝೂರನಾಗು ಮಣಿಮಯ ಹಾರನಾಗು
ವೀರಾಧಿವೀರ ನೀನಾಗು
ಭೂರಮಣನಾಗು ಮಂತ್ರಿವಾರ ಸಂರಕ್ಷಕನಾಗು
ಕಾರುಣ್ಯಸಾಗರನಾಗು ಕಾಮಿತಫಲಿದನಾಗು
ಶ್ರೀ ರಾಮೇಶನ ಪಾದಾಬ್ಜ ವಾರಿಜ ಭಕ್ತನಾಗೆಂದು
ಶಾರದೆ ಪರಸಿದಳು                                                                  || 5 ||