ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Wednesday, August 17, 2011

'ಕೆಳದಿನೃಪ ವಿಜಯ' ಕೃತಿಯ ಇಂಗ್ಲಿಷ್ ಗದ್ಯಾನುವಾದ - ಒಂದು ಅಮೂಲ್ಯ ಕೊಡುಗೆ

     ೧೫ನೆಯ ಶತಮಾನದಲ್ಲಿ ಉದಯಿಸಿ ಸುಮಾರು ೨೫೦ ವರ್ಷಗಳ ಕಾಲ ಬಾಳಿದ ಬಲಿಷ್ಠ ಕೆಳದಿ ಸಂಸ್ಥಾನ ಕರ್ನಾಟಕದ ಹೆಮ್ಮೆಯ ಪ್ರಧಾನ ರಾಜಸತ್ತೆಯಾಗಿದ್ದು, ವೈಭವದ ಸ್ಥಿತಿಯಲ್ಲಿ ಮೈಸೂರು ಸಂಸ್ಥಾನಕ್ಕಿಂತಲೂ ಅಧಿಕ ಭೌಗೋಲಿಕ ವಿಸ್ತಾರ ಹೊಂದಿದ್ದಾಗಿತ್ತು. ಹಿಂದೂ ಸಂಸ್ಕೃತಿ ಮತ್ತು ತತ್ವಗಳ ರಕ್ಷಣೆಯಲ್ಲಿ ಈ ಸಂಸ್ಥಾನ ಪ್ರಮುಖ ಪಾತ್ರ ವಹಿಸಿತ್ತು. ಈ ರಾಜಸತ್ತೆಯಲ್ಲಿ ಆಳಿದ ಅರಸರುಗಳ ಚರಿತ್ರೆಯನ್ನು ವಿವರಿಸುವ ಕೃತಿಯೇ 'ಕೆಳದಿನೃಪ ವಿಜಯ'. ಕೆಳದಿ ಸಂಸ್ಥಾನದಲ್ಲಿ ಆಸ್ಥಾನಕವಿಯಾಗಿದ್ದ ಕವಿ ಲಿಂಗಣ್ಣನ ಈ ಕೃತಿ ಕೆಳದಿಯರಸರ ಜೀವನ ಚರಿತ್ರೆಯನ್ನು ಯಥಾವತ್ತಾಗಿ ತಿಳಿಸುವ ಚಂಪೂಗ್ರಂಥವಾಗಿದ್ದು ಐತಿಹಾಸಿಕ ಮಹತ್ವವುಳ್ಳದ್ದಾಗಿದೆ. ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಇತಿಹಾಸಾಸಕ್ತರಿಗೆ ಮಹತ್ವದ ಆಕರ ಗ್ರಂಥವಾಗಿರುವ ಇದನ್ನು ರಚಿಸಿದ ೧೭ನೆಯ ಶತಮಾನದ ಕವಿಲಿಂಗಣ್ಣನಿಂದಾಗಿಯೇ ಇವನ ನಂತರದವರು ಕವಿಮನೆತನದವರೆಂಬ ಹೆಸರು ಪಡೆದರು ಎಂಬುದು ಗಮನಾರ್ಹ.  ೧೨ ಆಶ್ವಾಸಗಳುಳ್ಳ ಈ ಕೃತಿ ಕೆಳದಿ ರಾಜರುಗಳ ಪೂರ್ಣ ಪರಿಚಯ ಮಾಡಿಕೊಡುವಲ್ಲಿ ಕವಿಯು ಯಶಸ್ವಿಯಾಗಿದ್ದು, ಜೊತೆಜೊತೆಗೆ ಚಿತ್ರದುರ್ಗದ ನಾಯಕರು, ಬೇಲೂರ ನಾಯಕರು, ವಿಜಯನಗರದ ಚಕ್ರವರ್ತಿಗಳು, ಷಾಹಿ ರಾಜರು, ಮೈಸೂರು ಒಡೆಯರು, ತರಿಕೆರೆಯ ನಾಯಕರು, ದೆಹಲಿಯ ಬಾದಷಹರು, ಅಹಮದ್ ನಗರದ ನಿಜಾಂಷಹನೇ ಮುಂತಾದವರು, ಬಿಜಾಪುರದವರು, ಸೋದೆ, ಗೇರುಸೊಪ್ಪ, ಬಿಳಗಿ ಇತ್ಯಾದಿ ಅರಸರ ಚರಿತ್ರೆಗಳು, ಶ್ರೀ ಶೃಂಗೇರಿ ಮಠದ ಪರಂಪರೆಯ ಗುರುಗಳು ಮುಂತಾದ ಚರಿತ್ರೆಗಳನ್ನು ಪ್ರಾಸಂಗಿಕವಾಗಿ ವಿವರಿಸಿದ್ದಾನೆ. ಕೃತಿಯ ೭ನೇ ಆಶ್ವಾಸದ ೧೫ನೆಯ ಪದ್ಯವನ್ನು ಸಾಂಕೇತಿಕವಾಗಿ  ಇಲ್ಲಿ ಉದಾಹರಿಸುವುದು ಉಚಿತವಾದೀತು: 
  ಚಂ||ಮಾ|| ಕಡುಗಿ ದುರಾಸೆಯಿಂ ಪ್ರಜೆಗಳಂ ನೆರೆನೋಯಿಸದಾ ನೃಪಾರ್ಥಮಂ
ಬಿಡದೆ ತದೀಯ ಸೌಮ್ಯಸುಪದಾರ್ಥಗಳಂ ಲವಮಾತ್ರಮಾದೊಡಂ
ಪೊಡವಿಯನೈದೆ ಪಾಳ್ಗೆಡಲೀಯದೆ ಬಲ್ವಿಡಿದಂಕೆಝಂಕೆಯಿಂ
ನಡೆಯಿಪನಿಂತು ನಾಡಿನಧಿಕಾರವನೇಳ್ಗೆಗೆ ತಂದನುರ್ವಿಯಂ
     ಈ ಪದ್ಯವು 'ದುರಾಸೆಯಿಂದ ಪ್ರಜೆಗಳನ್ನು ನೋಯಿಸದೆ, ಹಾಗೆಯೇ ಬರಬೇಕಾದ ರಾಜಸ್ವವನ್ನೂ ಬಿಟ್ಟುಕೊಡದೆ, ಭೂಮಿಯನ್ನು ಪಾಳುಗೆಡವಲು ಬಿಡದೆ, ಕಟ್ಟುಪಾಡುಗಳನ್ನು ವಿಧಿಸಿ, ಸೂಕ್ತ ಕಟ್ಟಾಜ್ಞೆಗಳನ್ನು ಮಾಡುತ್ತಾ ರಾಜ್ಯವನ್ನು ಅಭಿವೃದ್ಧಿಗೊಳಿಸಿದ' ಶಿಸ್ತಿನ ಶಿವಪ್ಪನಾಯಕನೆಂದೇ ಹೆಸರಾದ ಶಿವಪ್ಪನಾಯಕನ ಆಳ್ವಿಕೆಯ ಕಾಲದ ಸ್ಥಿತಿಯ ಪರಿಚಯ ಮಾಡಿಸುತ್ತದೆ.
ಕೆಳದಿ ಗುಂಡಾಜೋಯಿಸ್
ಕವಿಸುರೇಶ್
     ೧೭ನೆಯ ಶತಮಾನದಲ್ಲಿ ಪ್ರಚಲಿತವಿದ್ದ ಕಾವ್ಯನಮೂನೆಯಲ್ಲಿ ರಚಿತವಾಗಿರುವ ಈ ಕೃತಿ ಜನಸಾಮಾನ್ಯರಿಗೂ ತಲುಪಬೇಕು ಮತ್ತು ಇತಿಹಾಸಾಸಕ್ತರಿಗೂ ಉಪಯೋಗವಾಗಬೇಕು ಎಂಬ ದೃಷ್ಟಿಯಿಂದ ಕೆಳದಿಯ ಶ್ರೀ ಗುಂಡಾಜೋಯಿಸರು ಕನ್ನಡ ಸರಳ ಗದ್ಯರೂಪದಲ್ಲಿ ಸಿದ್ಧಪಡಿಸಿದ್ದು ಇದನ್ನು ಕನ್ನಡ ಸಾಹಿತ್ಯ ಪರಿಷತ್ತು ಮೊದಲ ಸಲ ೧೯೭೬ರಲ್ಲಿ ಮತ್ತು ನಂತರ ೧೯೯೯ರಲ್ಲಿ ಎರಡು ಸಲ ಮುದ್ರಿಸಿ ಪ್ರಕಟಿಸಿದೆ. ಶ್ರೀ ಗುಂಡಾಜೋಯಿಸರು ಕೆಳದಿಯ ರಾಜಪುರೋಹಿತರ ವಂಶಸ್ಥರಾಗಿದ್ದು, ಕೆಳದಿಯ ಇತಿಹಾಸ ಗುರುತಿಸುವ ಮತ್ತು ಪ್ರಾಮುಖ್ಯತೆಯನ್ನು ಅರಿವಿಗೆ ತರುವ ಮಹತ್ವದ ಕೆಳದಿ ಮ್ಯೂಸಿಯಮ್ ಸ್ಥಾಪಕರಾಗಿದ್ದು, ೧೯೬೦ರಲ್ಲಿ ಸ್ಥಾಪಿಸಿದ್ದ ಈ ಮ್ಯೂಸಿಯಮ್ ಅನ್ನು ೨೦೦೮ರಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಮುಕ್ತವಾಗಿ ಹಸ್ತಾಂತರಿಸಿದ್ದು ಶ್ಲಾಘನೀಯ ಕಾರ್ಯವಾಗಿದೆ. ಇತ್ತೀಚೆಗೆ ನಡೆದ ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಇವರು ಇಳಿವಯಸ್ಸಿನಲ್ಲೂ ಚೈತನ್ಯದ ಚಿಲುಮೆಯಾಗಿದ್ದಾರೆ. ಈ ಗದ್ಯಾನುವಾದದಿಂದ ಕವಿಲಿಂಗಣ್ಣನ ಕೃತಿ ಹೆಚ್ಚು ಹೆಚ್ಚು ಜನರಿಗೆ ತಲುಪುವಂತೆ ಮಾಡಿದ ಕೀರ್ತಿ ಗುಂಡಾಜೋಯಿಸರಿಗೆ ತಲುಪುತ್ತದೆ. 


      ಈ ಕೃತಿ ಕನ್ನಡಿಗರಿಗೆ ಮಾತ್ರವಲ್ಲದೆ ಕನ್ನಡೇತರರಿಗೂ ಪರಿಚಯವಾಗಬೇಕೆಂಬ ಉದ್ದೇಶದಿಂದ ಸಹೋದರ ಕವಿಸುರೇಶ್ ಕೃತಿಯ ಇಂಗ್ಲಿಷ್ ಗದ್ಯಾನುವಾದವನ್ನು ಮಾಡಿ ಸಾರಸ್ವತಲೋಕಕ್ಕೆ ಒಂದು ಅಮೂಲ್ಯ ಕೊಡುಗೆ ನೀಡಿದ್ದಾರೆ. ಕರ್ನಾಟಕ ಸಚಿವಾಲಯದಲ್ಲಿ ಸೆಕ್ಷನ್ ಅಧಿಕಾರಿಯಾಗಿದ್ದು ಕೆಲವು ವರ್ಷಗಳ ಹಿಂದೆ ಸ್ವ ಇಚ್ಛಾ ನಿವೃತ್ತಿ ಹೊಂದಿ ಶಿವಮೊಗ್ಗದಲ್ಲಿ ನೆಲೆಸಿರುವ ಇವರು ಬರವಣಿಗೆಯಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದು, ಕೆಳದಿ ಕವಿಮನೆತನದವರನ್ನು ಪರಿಚಯಿಸುವ 'ಹಳೇ ಬೇರು - ಹೊಸ ಚಿಗುರು', ಕವಿಮನೆತನದ ಅದ್ಭುತ ಪ್ರತಿಭೆ ಎಸ್.ಕೆ. ಲಿಂಗಣ್ಣಯ್ಯ (ಲಿಂಗಣ್ಣ ಕವಿಯ ವಂಶಸ್ಥರು)ನವರ ಜೀವನ ಚರಿತ್ರೆ (ಇಂಗ್ಲಿಷ್‌ನಲ್ಲಿ) Karmayogi – Kalavallabha S.K. LINGANNAIYA’, ವ್ಯಕ್ತಿತ್ವ ವಿಕಸನ ಕುರಿತ ಲೇಖನಗಳ ಸಂಗ್ರಹ 'ಉತ್ಕೃಷ್ಟದೆಡೆಗೆ', ಡಾ. ವೆಂಕಟೇಶ ಜೋಯಿಸ್ ರಚಿಸಿದ 'ಮರೆಯಲಾಗದ ಕೆಳದಿ ಸಾಮ್ರಾಜ್ಯ' ಪುಸ್ತಕದ ಇಂಗ್ಲಿಷ್ ಅನುವಾದUnforgettable Keladi Empire’  ಮತ್ತು  ಕೂಡ್ಲಿ ಜಗನ್ನಾಥ ಶಾಸ್ತ್ರಿಯವರ ಕೃತಿ 'ಕೂಡ್ಲಿ ಕ್ಷೇತ್ರದ ಪರಿಚಯ'ವನ್ನೂ ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿದ್ದಾರೆ. ಕವಿಲಿಂಗಣ್ಣನ ನಂತರದ ಕೆಳದಿ ಕವಿಮನೆತನದ ೯ನೆಯ ಪೀಳಿಗೆಗೆ ಸೇರಿದ ಕವಿಸುರೇಶ್ ಮಾಡಿರುವ ಕೆಳದಿನೃಪ ವಿಜಯದ ಇಂಗ್ಲಿಷ್ ಗದ್ಯಾನುವಾದ ಚೆನ್ನಾಗಿದೆ, ಓದಿಸಿಕೊಂಡು ಹೋಗುತ್ತದೆ. ಶ್ರೀ ಗುಂಡಾಜೋಯಿಸರು ಪ್ರತಿ ಪದ್ಯದ ಕನ್ನಡ ಗದ್ಯಾನುವಾದ ಮಾಡಿದ್ದರೆ ಈ ಇಂಗ್ಲಿಷ್ ಗದ್ಯಾನುವಾದದಲ್ಲಿ ಅಧ್ಯಾಯವಾರು ಮಾಡಲಾಗಿದೆ. ಪದ್ಯವಾರು ಅನುವಾದ ಮಾಡಿದರೆ ತುಂಡು ತುಂಡಾಗುವುದರಿಂದ ಕೃತಿಯನ್ನು ಅರಿಯುವಲ್ಲಿ ತೊಡಕಾಗಬಹುದೆಂದು ಹೀಗೆ ಮಾಡಲಾಗಿದೆ. ಆದರೆ ಮೂಲಾರ್ಥಕ್ಕೆ ವ್ಯತ್ಯಯವಾಗದಂತೆ ನೋಡಿಕೊಂಡು ಅನುವಾದಿಸಿರುವುದು ಲೇಖಕರ ಸಾಧನೆಯೇ ಸರಿ. ಕರಡು ರೂಪದಲ್ಲಿದ್ದಾಗ ಇದನ್ನು ನಾನು ಪೂರ್ಣವಾಗಿ ಓದಿ ಅಗತ್ಯದ ಕೆಲವು ಸೂಚನೆಗಳನ್ನು ನೀಡಿದ್ದ್ದು, ಅನುವಾದ ಸಮರ್ಪಕ ಮತ್ತು ಸಮಂಜಸವೆಂದು ಮನಗಂಡಿದ್ದೇನೆ. ಕರ್ನಾಟಕದ ಹೆಮ್ಮೆಯ ಕೆಳದಿ ಸಂಸ್ಥಾನದ ಕುರಿತ ವಿವರ ಕನ್ನಡೇತರರಿಗೂ ತಲುಪುವಂತಾಗಿದ್ದು ಸಂತಸದ ಸಂಗತಿಯಾಗಿದೆ. ಕೆಲವು ವರ್ಷಗಳ ಹಿಂದೆ ಈ ಕೃತಿಯ ಹಿಂದಿ ಗದ್ಯಾವತರಣಿಕೆಯನ್ನು  ಡಾ. ಉಮಾ ಹೆಗ್ಡೆಯವರು ಮಾಡಿದ್ದು, ಈಗ ಇಂಗ್ಲಿಷ್ ಗದ್ಯಾವತರಣಿಕೆ ಸಹ ಹೊರಬಂದಿರುವುದು ಕನ್ನಡ ಸಾರಸ್ವತಲೋಕದ ವ್ಯಾಪ್ತಿ ವಿಸ್ತಾರವಾದಂತಾಗಿದೆ. ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಉಪ ನಿರ್ದೇಶಕರಾಗಿರುವ ಡಾ. ರಾಜಾರಾಮ ಹೆಗ್ಡೆಯವರು ಮುನ್ನುಡಿ ಬರೆದಿದ್ದು ಅದರಲ್ಲಿ ಅಂತರರಾಷ್ಟ್ರೀಯ ವಿದ್ವಾಂಸರು, ಸಂಶೋಧಕರು ಮತ್ತು ವಿಶಾಲ ಓದುಗ ಸಮುದಾಯ ತಲುಪುವಲ್ಲಿ ಇದು ಉತ್ತಮ ಪ್ರಯತ್ನವೆಂದು ಶ್ಲಾಘಿಸಿದ್ದಾರೆ. ಮೂಲ ಕೃತಿಯಲ್ಲಿ ಇಲ್ಲದ ಹೊಸ ಚಿತ್ರಗಳು, ಕೆಳದಿ ಸಂಸ್ಥಾನದ ಭೂಪಟ, ಕವಿಲಿಂಗಣ್ಣನ ಕುರಿತು ಟಿಪ್ಪಣಿ, ಕೆಳದಿ ಕವಿಮನೆತನದ ಪೀಳಿಗೆಯ ವಿವರಗಳು, ಇತ್ಯಾದಿಗಳು ಕೃತಿಯ ಮೌಲ್ಯ ಹೆಚ್ಚಿಸಿವೆ. ಭಾರತ ಸರ್ಕಾರದ ರಾಷ್ಟ್ರೀಯ ಹಸ್ತಪ್ರತಿಗಳ ಮಿಷನ್, ಕೆಳದಿ ಹಸ್ತಪ್ರತಿಗಳ ಸಂಪನ್ಮೂಲ ಕೇಂದ್ರ, ಕೆಳದಿ ಇವರು ಪ್ರಕಾಶಕರಾಗಿ ಹೊರತಂದಿರುವ ೨೦೫ ಪುಟಗಳ ಈ ಪುಸ್ತಕದ ಬೆಲೆ ರೂ.೧೫೦/-. ಸಾರಸ್ವತ ಲೋಕಕ್ಕೆ ಉತ್ತಮ ಕೊಡುಗೆ ನೀಡಿದ ಕೆಳದಿ ಕವಿಮನೆತನದ ಸುರೇಶ್ ಅಭಿನಂದನಾರ್ಹರು. 
*******************

3 comments:

  1. ಶ್ರೀ ನಾಗರಾಜ್,
    ನಮಸ್ತೆ,
    ಲೇಖನ ಓದಿ ಬಲು ಸಂತಸಗೊಂಡೆ. ಶ್ರೀ ಸುರೇಶರ ಅತಿಯಾದ ಕಾರ್ಯಒತ್ತಡದಲ್ಲೂ ಇಂತಹ ಮಹತ್ಕಾರ್ಯ ಮಾಡಿರುವುದು ಅವರ ಬಗ್ಗೆ ಹೆಮ್ಮೆ ಪಡಲೇಬೇಕು. ಗ್ರಂಥವನ್ನು ಮೇಲ್ನೋಟಕ್ಕೆ ನೋಡಿದಾಗಲೇ ಪೂರ್ಣ ಓದಬೇಕೆಮನಿಸಿದೆ. ಕವಿಕಿರಣ ಬ್ಲಾಗ್ನಲ್ಲಿ ಓದುವೆ. ಇಂತಹ ಉತ್ತಮ ಗ್ರಂಥದ ಪರಿಚಯಮಾಡಿದ ನಿಮಗೂ ಲೇಖಕರಿಗೂ ಅಭಿನಂದನೆಗಳು.

    ReplyDelete
  2. ಹೌದು, ಶ್ರೀಧರ್. ಸುರೇಶನ ಈ ಕೆಲಸದಿಂದ ನನಗೂ ಬಹಳ ಆನಂದವಾಗಿದೆ.

    ReplyDelete
  3. ಶುಭ ಹಾರೈಕೆಗೆ ಧನ್ಯವಾದಗಳು

    ReplyDelete