ಸುಸ್ವಾಗತ

ಕೆಳದಿ ಕವಿ ಮನೆತನದ ಒಂದು ವಿಸ್ತೃತ ದರ್ಶನಕ್ಕೆ ನಿಮಗೆಲ್ಲಾ ಆತ್ಮೀಯ ಸ್ವಾಗತ
- KAVI SURESH, SHIMOGA

Sunday, May 29, 2011

ನವರಸಕವಿ ಕೆಳದಿ ಸುಬ್ಬಾಭಟ್ಟ

ಕೆಳದಿ ಕವಿಮನೆತನದ ಪೂರ್ವಜರು
ನವರಸಕವಿ ಕೆಳದಿ ಸುಬ್ಬಾಭಟ್ಟ
-ಡಾ: ಕೆಳದಿ ವೆಂಕಟೇಶ್ ಜೋಯಿಸ್

     ಕೆಳದಿ ಕವಿ ಮನೆತನದಲ್ಲಿ ಹೆಸರಾದ ಪ್ರಮುಖರಲ್ಲಿ ಲಿಂಗಣ್ಣ, ವೆಂಕಣ್ಣ ಇವರುಗಳ ಜೊತೆಗೆ ಕವಿ ಸುಬ್ಬಾಭಟ್ಟನೂ ಒಬ್ಬನು. ಕೆಳದಿ ಕಾಲದಲ್ಲಿ ಇಬ್ಬರು ಸುಬ್ಬ ಕವಿಗಳು ಬರುತ್ತಾರೆಂದೂ ಸುಬ್ಬ ಕವಿಯ ಕುರಿತು ಸಾಕಷ್ಟು ಚರ್ಚೆಯಿದೆ. ಯಕ್ಷಗಾನ ಪ್ರಸಂಗಗಳು ಹಾಗೂ ಅವುಗಳ ಕರ್ತೃಗಳ ಕುರಿತು ವಾದವಿವಾದವಿದೆ. ಡಾ:ಕೋಟ ಶಿವರಾಮ ಕಾರಂತರೂ, ಶ್ರೀ ಕುಕ್ಕಿಲ ಕೃಷ್ಣಭಟ್ಟರೂ ಈ ಬಗ್ಗೆ ಸಾಕಷ್ಟು ಚರ್ಚಿಸಿದ್ದಾರೆ. ಅದರಲ್ಲಿ ಯಕ್ಷಗಾನ ನಾಟಕಗಳ ಕರ್ತೃಗಳ ಬಗ್ಗೆ ಮುಖ್ಯವಾಗಿ ಸುಬ್ಬ ಎಂಬುವನ ವಿಚಾರದಲ್ಲಿ ಸಾಕಷ್ಟು ಚರ್ಚೆ ನಡೆಸಿರುವುದಿದೆ. ಕೆಳದಿ ಪೀಳಿಗೆಯ ಸುಬ್ಬ ಮತ್ತು ಪಾರ್ತಿ ಸುಬ್ಬ ಎಂಬುವವರು ಒಬ್ಬರೇ ಅಥವಾ ಬೇರೆ ಬೇರೆಯವರೆ ಎಂಬುದು ಇಲ್ಲಿ ನಡೆದ ವಾದ. ಇವರಿಬ್ಬರ ತಂದೆ ತಾಯಿಯವರು ಬೇರೆ ಬೇರೆ. ಇವರು ರಚಿಸಿರುವ ಕೃತಿಗಳು, ಇವರ ಆಶ್ರಯದಾತರು ಬೇರೆ ಎಂಬುದು ಸಾಬೀತಾಗಿದೆ.

     ಕೆಳದಿ ಕವಿಗಳಲ್ಲಿ ವೆಂಕ, ಸುಬ್ಬರು ಹೆಚ್ಚು ಚರ್ಚೆಗೆ ಒಳಗಾಗಿದ್ದಾರೆ. ಶ್ರೀ ಶಿವರಾಮ ಕಾರಂತರು ಮೈರಾವಣ ಕಾಳಗದ ಕತೃವಾದ ಅಜಪುರದ ಸುಬ್ಬನಲ್ಲಿ, ರುಕ್ಮಿಣೀ ಸ್ವಯಂವರ ಮತ್ತು ಪಾರಿಜಾತಗಳನ್ನು ಬರೆದ ಕೆಳದಿಯ ಸುಬ್ಬನನ್ನೂ, ಐರಾವತ, ಶ್ರೀ ಕೃಷ್ಣಲೀಲೆ, ಕುಶಲವರ ಕಾಳಗಗಳನ್ನು ಬರೆದ ಅನಾಮಧೇಯ ಎನಿಸಿದ್ದ ಕುಕ್ಕಿಲರ ಪಾರ್ತಿಸುಬ್ಬನನ್ನೂ ಸೇರಿಸಿ ಒಬ್ಬ ಸುಬ್ಬನನ್ನು ಎತ್ತಿಹಿಡಿದಿರುವುದಿದೆ.  ಆದರೆ ಮೇಲಿನ ಪ್ರಸಂಗಗಳ ಕತೃಗಳು ಮೂವರು ಆಗಿಹೋಗಿದ್ದಾರೆ. ಅವರಲ್ಲಿ ಆಡುವಳ್ಳಿಯ ಸುಬ್ರಹ್ಮಣ್ಯ, ಕೆಳದಿಯ ಸುಬ್ಬ ಮತ್ತು ಪಾರ್ತಿ ಸುಬ್ಬ.
     ಪಾರ್ತಿ ಸುಬ್ಬ ಅಥವಾ ಹಂಪೆಯಾತ್ಮನ ಕುರಿತು ಹೆಚ್ಚಿನ ಮಾಹಿತಿ ದೊರೆಯುವುದಿಲ್ಲ. ವೆಂಕಾರ್ಯನ ಕುರಿತು ಹೆಚ್ಚಿನ ಮಾಹಿತಿ ದೊರೆಯುತ್ತದೆ. ಈತ ಬಾಲ ವಾಲ್ಮೀಕಿ ಎಂದು ಖ್ಯಾತನಾಗಿದ್ದ ಪ್ರಧಾನಿ  ಅಥವಾ ಮಹಾಮಂತ್ರಿ ಆಗಿದ್ದನೆಂದು ಕಂಡು ಬರುತ್ತದೆ. ಈತನು ಕೆಳದಿಯ ಹಿರಿಯ ಬಸವಪ್ಪನಾಯಕನ ಆಸ್ಥಾನದಲ್ಲಿದ್ದನೆಂದು ಡಾ: ಶಿವರಾಮ ಕಾರಂತರ ಅಭಿಪ್ರಾಯ. ಆದರೆ ಕವಿ ಚರಿತ್ರೆಗಾರರ ಅಭಿಪ್ರಾಯ ಆಧರಿಸಿ ಕುಕ್ಕಿಲರು ಕ್ರಿ. ಶ. ೧೭೬೩ರ ಅನಂತರದಲ್ಲಿ ಕೆಳದಿಯನ್ನು ಆಳಿದ ಹೈದರಾಲಿಯ ಮಂತ್ರಿ ಆಗಿರಬಹುದೆಂದು ಹೇಳುತ್ತಾರೆ.  ರುಕ್ಮಿಣೀ ಸ್ವಯಂವರ ಪ್ರಸಂಗದ ಕೊನೆಯಲ್ಲಿ ಹೇಳಿರುವ ಮಾತುಗಳಿಂದ ಈತನು ಕೆಳದಿಯ ಭೂರಮಣನಾದ ಬಸವೇಂದ್ರನ ಆಶ್ರಯದಲ್ಲಿದ್ದ ಕವಿ ವೆಂಕಣಾರ್ಯ ಮತ್ತು  ಅವನ ಪತ್ನಿ ದೇವಮ್ಮ ಅವರ ಹಿರಿಯ ಮಗ ಚೆನ್ನಯ್ಯನ ತಮ್ಮ ಸುಬ್ಬ ಎಂಬುದು ಸ್ಪಷ್ತವಾಗುತ್ತದೆ. ಇವನು ರುಕ್ಮಿಣೀ ಸ್ವಯಂವರ ಮತ್ತು ಪಾರಿಜಾತ ಎಂಬ ಎರಡು ಪಸಂಗಗಳ ಕರ್ತೃ.
     ಪಾರಿಜಾತ ಮತ್ತು ರುಕ್ಮಿಣೀ ಸ್ವಯಂವರಗಳನ್ನು ಬರೆದ ಕೆಳದಿ ಸುಬ್ಬ ಮತ್ತು ಹನುಮದ್ರಾಮಾಯಣವನ್ನು ಬರೆದ ಆಡುವಳ್ಳಿ ಸುಬ್ಬ ಬೇರೆಬೇರೆಯವರು. ಇವನ ತಂದೆ ವೆಂಕಾರ್ಯ. ಈ ವೆಂಕಾರ್ಯನು ತನ್ನ ಕೃತಿಗಳಲ್ಲಿ ತನ್ನ ತಂದೆ ಲಿಂಗಪ್ಪನನ್ನು ಸ್ಮರಿಸಿದ್ದಾನೆಯೇ ಹೊರತು ಆಶ್ರಯದಾತನ ಹೆಸರು ಹೇಳಿಲ್ಲ. ಸಿಕ್ಕಿರುವ ಕೃತಿಗಳಲ್ಲಿ ಕೆಲವು ಗರಿಗಳು ಕಳೆದು ಹೋಗಿರುವುದರಿಂದ ಹೇಳಿದ್ದರೂ ಹೇಳಿರಬಹುದೆನಿಸುತ್ತದೆ. ಇವನ ಮಗ ಕೆಳದಿ ಸುಬ್ಬನು ತನ್ನ ರುಕ್ಮಿಣೀ ಸ್ವಯಂವರದ ಅಂತ್ಯದಲ್ಲಿ 'ಧಾರಿಣಗೆ ಪಶ್ಚಿಮದಿ ಶೋಭಿಪ| ವಾರಿನಿಧಿಯನಾಳ್ವ ಕೆಳದಿಯ| ಭೂರಮಣ ಬಸವೇಂದ್ರನಂಘ್ರೀಯ ಸೇರಿ ಬಾಳ್ವ ವೆಂಕಣಾರ್ಯನ ಮಗ ತಾನು' ಎಂದು ಹೇಳಿಕೊಂಡಿರುವುದರಿಂದ ಈ ವೆಂಕನಿಗೆ ಕೆಳದಿಯ ಕಿರಿಯ ಬಸವಪ್ಪ ನಾಯಕನ ಆಶ್ರಯವಿದ್ದುದು ಸ್ಪಷ್ಟವಾಗಿ ತಿಳಿಯುತ್ತದೆ.

     ರುಕ್ಮಿಣೀ ಸ್ವಯಂವರ, ಪಾರಿಜಾತ ಬರೆದ ಕೆಳದಿ ಸುಬ್ಬನು ಕೆಳದಿಯ ಕವಿ ಮನೆತನಕ್ಕೆ ಸೇರಿದವನು. ಕವಿ ಸುಬ್ಬ ಅಥವಾ ಸುಬ್ಬಾಭಟ್ಟ ಎಂದು ಕರೆಯಲ್ಪಡುತ್ತಿದ್ದ ಈತನು ಕೆಳದಿ ಸಾಮ್ರಾಜ್ಯದ ಕಡೆಯ ದಿನಗಳಲ್ಲಿದ್ದವನು. ಆಗಲೇ ಸಾಮ್ರಾಜ್ಯ ಕೊನೆಗೊಂಡ ನಂತರ ರಾಜಾಶ್ರಯ ಇಲ್ಲದೆ ಜನರ ನಡುವೆ ಆಶ್ರಯ ಪಡೆದುಕೊಂಡವನಿವನು. ಈತನು ಯಕ್ಷಗಾನ ಪಸಂಗವನ್ನು ರಚಿಸುವುದರ ಜೊತೆಗೆ ನಟನೆಯನ್ನೂ, ಭಾಗವತಿಗೆಯನ್ನೂ ರೂಢಿಸಿಕೊಂಡು ತನ್ನ ಬದುಕನ್ನು ಸಾಗಿಸಿದಂತೆ ಕಂಡು ಬರುತ್ತದೆ. ಈತನ ಎರಡು ಕೃತಿಗಳಲ್ಲಿ ರುಕ್ಮಿಣಿ ಸ್ವಯಂವರವನ್ನು ಕೆಳದಿಯ ಅರಸು ಮನೆತನ ಅಸ್ತಿತ್ವದಲ್ಲಿದ್ದಾಗ ರಚಿಸಿರುವಂತೆ ಕಂಡು ಬರುತ್ತದೆ. ಪಾರಿಜಾತವನ್ನು ಕೆಳದಿ ರಾಜ್ಯ ಪತನಾ ನಂತರ ರಚಿಸಿರಬೇಕು.  ರುಕ್ಮಿಣೀ ಸ್ವಯಂವರ ಪ್ರಸಂಗ ಕೃತಿಯಲ್ಲಿ ತನ್ನ ವಿಷಯವನ್ನು ಹೇಳುವ ಸಂಬಂಧದಲ್ಲಿ ತನ್ನ ಆಶ್ರಯದಾತ ಬಸವೇಂದ್ರ ಅಂದರೆ ಕಿರಿಯ ಬಸವಪ್ಪ ನಾಯಕನನ್ನು ಸ್ಮರಿಸಿದ್ದಾನೆ. ಇದು ಪಾರಿಜಾತ ಪ್ರಸಂಗದಲ್ಲಿ ಕಂಡುಬರುವುದಿಲ್ಲ. ಇದರ ಆಧಾರದಿಂದ ಇವನ ಕಾಲವನ್ನು ಕ್ರಿ. ಶ. ೧೭೬೦ ಎಂದು ಹೇಳಬಹುದು.
     ರುಕ್ಮಿಣೀ ಸ್ವಯಂವರ, ಪಾರಿಜಾತ  ಈ ಎರಡು ಪ್ರಸಂಗಗಳಿಗೆ ಭಾಗವತದಿಂದಲೇ ವಸ್ತುವನ್ನು ಆರಿಸಿಕೊಂಡಿದ್ದಾನೆ. ಇವುಗಳಲ್ಲಿ ಶೃಂಗಾರದ ಜೊತೆಗೆ ವೀರರಸವನ್ನೂ ಅಳವಡಿಸಿದ್ದಾನೆ. ಇಲ್ಲಿ ರುಕ್ಕ್ಮ, ಜೈದ್ಯಪತಿ ಮೊದಲಾದವರ ಗರ್ವಭಂಗವಾಗಿದ್ದರೆ, ಅಲ್ಲಿ ದೇವೇಂದ್ರನ ಅಹಂಕಾರ ಅಳಿದುದನ್ನು ಹೇಳುತ್ತದೆ.  ನರಕಾಸುರನ ವಧೆಯಗಿದೆ. ರುಕ್ಮಿಣೀ ಸ್ವಯಂವರಕ್ಕಿಂತ ಪಾರಿಜಾತ ಉತ್ತಮ ಕಲಾಕೃತಿ.
ರುಕ್ಮಿಣೀ ಸ್ವಯಂವರ:  
    ಈ ಯಕ್ಷಗಾನ ಕೃತಿಯ ಆರಂಭದಲ್ಲಿ ಕವಿಯು  ಗಣಪ, ಶಿವ, ಮುಕಾಂಬಿಕೆ ವಿಷ್ಣು, ಲಕ್ಷ್ಮೀ, ಬ್ರಹ್ಮ, ಶಾರದೆ ಇವರುಗಳ ಜೊತೆಗೆ ದೇವ ಗುರು ಪ್ರಾರ್ಥನೆ ಮಾಡುವುದರೊಂದಿಗೆ ಪ್ರಸಂಗವನ್ನು ಪ್ರಾರಂಭಿಸುತ್ತಾನೆ.  ದ್ವಾರಕಿಯ  ಕೃಷ್ಣ ತನ್ನ ಅಣ್ಣ ಬಲರಾಮನ ನೆರವಿನಿಂದ ಕೂಡಿನಪುರಕ್ಕೆ ಬಂದು ಅಲ್ಲಿನ ಅರಸನ ಮಗಳು ರುಕ್ಮಿಣಿಯನ್ನು ಕರೆದುಕೊಂಡು ಹೋಗಿ ಮದುವೆ ಆಗುತ್ತಾನೆ. ರುಕ್ಮಿಣಿಯ ತಂದೆ ಭೀಷ್ಮಕನು ತನ್ನ ಮಗಳ ಇಚ್ಛೆ ಪೂರ್ಣವಾಗಲು ನೆರವಾಗುತ್ತಾನೆ. ಕೃಷ್ಣನೊಡನೆ ಅವಳ ಲಗ್ನವನ್ನು ವಿರೋಧಿಸಿದ ಅವಳ ಅಣ್ಣ ರುಕ್ಮ ಚೈದ್ಯರಾಜನಿಗೆ ಕೊಡಲು ಯತ್ನಿಸಿ ವಿಫಲನಾಗುತ್ತಾನೆ. ಕೃಷ್ಣನಿಂದ ರುಕ್ಮನ ಗರ್ವಭಂಗವಾಗುತ್ತದೆ. ಇದರಲ್ಲಿ ಕುಂಡಿನಪುರದಿಂದ ಕನ್ಯೆ ರುಕ್ಮಿಣಿಯ ದೌತ್ಯವನ್ನು ಹೊತ್ತು ದ್ವಾರಕಿಗೆ ಬಂದ ವಿಪ್ರನೊಬ್ಬನ ಪಾತ್ರ ಸೃಷ್ಟಿ ಚೆನ್ನಾಗಿದೆ. ಅವನು ತಂದೊಪ್ಪಿಸಿದ ಪತ್ರಸಾರ ಗಮನಿಸುವಂತಿದೆ.
ಪಾರಿಜಾತ:   

  ರುಕ್ಮಿಣೀ ಸ್ವಯಂವರದಂತೆ ಇದರಲ್ಲಿಯೂ ಆರಂಭದಲ್ಲಿ ತನ್ನ ಇಷ್ಟದೇವತೆಯದ ದೇವಕಿಯಣುಗನ ಪ್ರಾರ್ಥನೆಯ ನಂತರ ಗಣಪ, ಶಿವ, ಮೂಕಾಂಬಿಕೆಯರನ್ನು ಸ್ಮರಿಸಿ ದ್ವಿಪದಿಯಲ್ಲಿ
     ಪಾರಿಜಾತವ ತಂದು ರಂಜಿಸಿದ ಕಥೆಯ|
    ಸಾರವನು ಕುಟಜಾದ್ರಿ ಸದನ ವಾಸಿನಿಯ||
     ಕೃಪೆಯಿಂದ ಪೇಳ್ವೆ ನಾ ಯಕ್ಷಗಾನದಲಿ|
     ವಿಪುಳಮತಿಯುತರಿದ ಕೇಳಿ ಲಾಲಿಸಲಿ||
ಎಂದು ತನ್ನ ವಿನಯವನ್ನು ಮೆರೆದಿದ್ದಾನೆ.

     ಕೃಷ್ಣ ದ್ವಾರಕಿಯಲ್ಲಿದ್ದಾಗ ಒಂದು ದಿನ ನಾರದನ ಆಗಮನವಾಗುತ್ತದೆ. ಅರ್ಘ್ಯ ಪಾದ್ಯಾದಿಗಳನ್ನಿತ್ತ  ಕೃಷ್ಣ, ಅವರನ್ನು ಉಪಚರಿಸುತ್ತಾನೆ. ದೇವಮುನಿಯಿಂದ ಪಡೆದ ಪಾರಿಜಾತವನ್ನು ಕೃಷ್ಣ ರುಕ್ಮಿಣಿಗೆ ಮುಡಿಸುತ್ತಾನೆ. ದೂತಿಯೊಬ್ಬಳು ಸತ್ಯಭಾಮೆಯಲ್ಲಿ ವಿಷಯ ತಿಳಿಸಿದಾಗ ಅವಳಲ್ಲಿ ಸವತಿ ಮಾತ್ಸರ್ಯ ಬುಸುಗುಟ್ಟುತ್ತದೆ. ಕೃಷ್ಣ ಬರುವ ವೇಳೆಗೆ ಸಕಲಾಸ್ತ್ರಗಳನ್ನೂ ಸಿದ್ಧ ಪಡಿಸಿಕೊಳ್ಳುತ್ತಾಳೆ ಭಾಮೆ. ಆ ಸಂದರ್ಭದ  ಸಂಭಾಷಣೆ ಸ್ವಾರಸ್ಯವಾಗಿದೆ.
ಕೃಷ್ಣ-ಸತ್ಯಭಾಮೆಯರ ಸಂಭಾಷಣೆ:

ರಾಗ: ಸೌರಾಷ್ಟ್ರ,                          ಏಕತಾಳ
ಕೃಷ್ಣ: ವಾರಿಜಗಂಧಿನಿ ಕೀರಭಾಷಿಣಿ ಮುದ್ದು ನೀರೆ ನೀ ಬಾಗಿಲು ತೆರೆಯೆ||
ಭಾಮೆ: ದ್ವಾರದಿ ದನಿಯನು ತೋರುವಾತನು ನೀನು ಯಾರು ಪೇಳೈ ನಿನ್ನ ಹೆಸರು||
ಕೃಷ್ಣ: ಪ್ರಾಣನಾಯಕ ನಾಗವೇಣಿ ಕೇಳೆಲೆ ನಾನು ವೇಣುಗೋಪಾಲನು ಕಾಣೆ||
ಭಾಮೆ: ವೇಣುಗೋಪಾಲ ನೀನಾದರೊಳ್ಳಿತು ನಿನ್ನ ಠಾಣದಿ ಪಶುವ ಕಾಯಯ್ಯ||
ಕೃಷ್ಣ: ಕ್ರೂರ ಕಾಳಿಂಗನ ಪೆಡೆಯ ತುಳಿದು ಬಂದ ಧೀರ ಕಾಣೆಲೆ ಚಾರುಗಾತ್ರೆ||
ಭಾಮೆ: ಧೀರ ನೀನಾದರೆ ಪಾವನಾಡಿಸಿಕೊಂಡು                ಗಾರುಡಿಗಾರ ಹೋಗಯ್ಯ||
ಕೃಷ್ಣ: ಬಲ್ಲಿದರೊಳು ಬಲವಂತರೆನಿಸುವ ಮಲ್ಲರ ಗೆಲಿದವ ಕಾಣೆ||
ಭಾಮೆ: ಮಲ್ಲರ ಗೆಲಿದವನಾದರೆ ಗರುಡಿಗೆ ನಿಲ್ಲದೆ ಪೋಗು ಪೋಗಯ್ಯ||
ಕೃಷ್ಣ: ಕಾದಿದ್ದ ಕರಡಿಯ ಗೆಲಿದು ಕಾಮಿನಿಯ ವಿನೋದದಿ ತಂದವ ಕಾಣೆ||
ಭಾಮೆ: ಆದರೊಳ್ಳಿತು ಘೋರಾರಣ್ಯದೊಳಿಪ್ಪಂತ ವ್ಯಾಧರ ಕೂಡಿ ಬಾಳಯ್ಯ||
ಕೃಷ್ಣ: ಕಾಂತೆ ಕೇಳಾದರೇಳು ವೃಷಭವ ಕಟ್ಟಿ ನೀಲಕಾಂತೆಯ ತಂದವ ಕಾಣೆ||
ಭಾಮೆ: ಅಂತಾದರೊಳ್ಳಿತು ಹೇರಾಟವನು ಮಾಡಿ ಸಂತುಷ್ಟನಾಗು ಹೋಗಯ್ಯ||
ಕೃಷ್ಣ: ಕಮಲಕೋರಕ ಸನ್ನಭಕುಚಯುಗೆ ನಿನ್ನ ರಮಣ ಕಾಣೆಲೆ ಮಂದಯಾನೆ||
     ರಮಣನೆಂಬುದ ಕೇಳಿ ಕದವ ತೆಗೆದು ಮತ್ತೆ ರಮಣಿಯು ಮಲಗಿದಳಾಗ||

 ಉಡದೆ, ಉಣ್ಣದೆ, ಬರಿದೆ ಮಂಚದಲ್ಲಿ ಮಲಗಿದ್ದ ಪತ್ನಿಯನ್ನು ಸಂತೈಸಿ, ಅವಳ ಮುನಿಸಿನ ಕಾರಣವನ್ನು ತಿಳಿದ  ಕೃಷ್ಣ ನಿನಗೆ ಸುಮವೊಂದನೀವುದಾವಚಂದ ಎನುತವಳಿಗಿತ್ತೆ; ನಿನಗೆ ವೃಕ್ಷವನೆ ತಂದೀವೆ- ಎನ್ನುತ್ತಾನೆ.
     ಅಷ್ಟರಲ್ಲಿ ನರಕಾಸುರನ ಹಾವಳಿ ಹೆಚ್ಚಿ, ಅವನ ಉಪಟಳವನ್ನು ಕೊನೆಗಾಣಿಸಬೇಕೆಂದು ದೇವೇಂದ್ರ ಶ್ರೀ ವಿಷ್ಣುವಿನಲ್ಲಿ ಬಿನ್ನಹ ಮಾಡಿಕೊಂಡಿರುತ್ತಾನೆ. ಕಾಕತಾಳೀಯವೆನಿಸುವಂತೆ ಎರಡು ಕಾರ್ಯಗಳು ಒಮ್ಮೆಲೇ ಕೂಡಿದಂತಾಗಿ ಕೃಷ್ಣ ಗರುಡನ ಬೆನ್ನೇರಿ ಭಾಮೆಯೊಡನೆ ಇಂದ್ರ ಲೋಕದತ್ತ ಧಾವಿಸುತ್ತಾನೆ. ಹಾದಿಯಲ್ಲಿ ಪ್ರಾಗ್ಜೋತಿಷಪುರ ಗೋಚರಿಸುತ್ತದೆ. ಅಲ್ಲಿ  ಕೃಷ್ಣ ಒಳಹೊಕ್ಕು ಮುರ, ನರಕಾಸುರ ಮೊದಲಾದ ರಕ್ಕಸರನ್ನು ಸಂಹರಿಸಿ ಕಂಟಕ ನಿವಾರಣೆ ಮಾಡುತ್ತಾನೆ. ದೇವಲೋಕದಲ್ಲಿ ದೇವ ದಂಪತಿಗಳಿಗೆ ಅಭೂತ ಪೂರ್ವ ಸ್ವಾಗತ ಲಭಿಸುತ್ತದೆ. ಆದರೆ ಸತ್ಯಭಾಮೆ ಕೃಷ್ಣನ ಮಾತನ್ನೂ ಲೆಕ್ಕಿಸದೆ ಅಲ್ಲಿದ್ದ ಪಾರಿಜಾತದ ವೃಕ್ಷವನ್ನು ಬೇರು ಸಹಿತ ಕಿತ್ತು ಗರುಡನ ಹೆಗಲಿಗೇರಿಸುತ್ತಾಳೆ. ಅದರಸಲುವಾಗಿ ಇಂದ್ರನೊಡನೆ ಯುದ್ಧ ನಡೆದು ಇಂದ್ರನ ಗರ್ವಭಂಗವಾಗುತ್ತದೆ; ಲೋಕ ಕಲ್ಯಾಣವಾಗುತ್ತದೆ. ಈ ಕಥೆಯ ವಸ್ತುವನ್ನು ಎತ್ತಿಕೊಂಡು ರಸ ಪೂರ್ಣವಾದೊಂದು ಯಕ್ಷಗಾನವನ್ನು ಕವಿ ರಚಿಸಿದ್ದಾನೆ. ಕೆಳದಿ ಸುಬ್ಬನ ಪಾಂಡಿತ್ಯ ಪದರ್ಶನಕ್ಕೆ  ಇದೊಂದು ಉತ್ತಮ ನಿದರ್ಶನ ಚೂರ್ಣಿಕೆಯಗಿದೆ.
     ಡಾ ಸಾ.ಶಿ. ಮರುಳಯ್ಯನವರು ಹೇಳುವಂತೆ ಕೆಳದಿ ಸುಬ್ಬನ ಎರಡೂ  ಪ್ರಸಂಗಗಳಲ್ಲಿ ಭಕ್ತಿಯ ಭಾಗೀರಥಿ ನಿರರ್ಗಳವಾಗಿ ಹರಿದಿದ್ದಾಳೆ. ಅಲ್ಲಿನ ಪ್ರಮುಖ ರಸಗಳಾದ ಶೃಂಗಾರ, ಹಾಸ್ಯ, ಕರುಣ, ವೀರಗಳ ಜೊತೆ ಜೊತೆಯಲ್ಲಿ ಭಕ್ತಿರಸವೂ ಪ್ರವಹಿಸಿದೆ. ತನ್ನ ಕುಲದೇವತೆ ಕೊಲ್ಲೂರು ಮೂಕಾಂಬಿಕೆಯನ್ನು ಕುರಿತ ಅವನ ಭಕ್ತಿಗೀತೆಯೊಂದಿಗೆ ಮಂಗಳ ಹಾಡಬಹುದು.  ಒಟ್ಟಿನಲ್ಲಿ ಕವಿ ಸುಬ್ಬ ಅಥವಾ ಸುಬ್ಬಾಭಟ್ಟ  ಕೆಳದಿ ಕವಿ ಮನೆತನದ ಮತ್ತೊಂದು ಕುಸುಮ. ಈತನೂ ಲಿಂಗಣ್ಣ ಕವಿಯಂತೆ ಸಂಪನ್ನ ಕವಿ ಎನ್ನುವುದರಲ್ಲಿ ಎರಡು ಮಾತಿಲ್ಲ.
*****
('ಕವಿಕಿರಣ'ದ 1,ಡಿಸೆಂಬರ್, 2009 ಸಂಚಿಕೆಯಲ್ಲಿ ಪ್ರಕಟಿತ ಲೇಖನ)

No comments:

Post a Comment